“ಅವನು ಅಮರಶ್ರೀ …ಆಶ್ರೀಗಿಂತ ಯಾವುದು ದೊಡ್ಡದಲ್ಲ” -ಶಿವರಾಜ್ ಕುಮಾರ್
ದಿವಂಗತ ನಟ ಪುನೀತ್ ರಾಜ್ ಕುಮಾರ ಅವರ 11 ನೇ ದಿನದ ಕಾರ್ಯವನ್ನ ಇಂದು ಕುಟುಂಬಸ್ಥರು ಮತ್ತು ಗಣ್ಯರು ಸೇರಿಕೊಂಡು ನೆರವೇರಿಸಿದರು. ಇಷ್ಟವಾಗುತ್ತಿದ್ದ ತಿಂಡಿ ತಿನಿಸುಗಳನ್ನ ಇಟ್ಟು ಮನೆಯಲ್ಲಿ ಪೂಜೆ ನೆರವೇರಿಸಲಾಗಿದೆ. ಪುನೀತ್ ಅವರ ಸಮಾಧಿಯನ್ನ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಮತ್ತು ಚಿತ್ರ ರಂಗದ ಕೆಲವೇ ಗಣ್ಯರಿಗೆ ಅವಕಾಶ ನೀಡಲಾಗಿತ್ತು.
ಬೆಳಗ್ಗೆ 10 ಗಂಟೆ ಸುಮಾರಿಗೆ ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧ್ರುತಿ, ವಂದಿತಾ, ಸಹೋದರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪುನೀತ್ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಲಿದ್ದಾರೆ.
ಚಿಕ್ಕಪ್ಪನ ಪುಣ್ಯ ತಿಥಿ ಕಾರ್ಯ ನೆರವೇರಿಸುವ ಮೂಲಕ ವಿನಯ್ ರಾಜ್ ಕುಮಾರ್ ಕೇಶಮುಂಡನ ಮಾಡಿಸಿಕೊಂಡು ಅಗಲಿದ ಅಪ್ಪುಗೆ ಪಿಂಡ ಪ್ರದಾನ ಮಾಡಿದರು.
“ಅಪ್ಪುನನ್ನ ಕಳೆದುಕೊಂಡಿದ್ದೇವೆ ಎಂದು ಈಗಲೂ ನಂಬಲು ಆಗುತ್ತಿಲ್ಲ. ತುಂಬಾ ನೋವಾಗುತ್ತಿದೆ. ಇಂದು ಪೂಜೆ ಮಾಡುವಾಗಲೂ ತುಂಬಾ ನೋವಾಯಿತು. ಯಾರಿಗೂ ತೊಂದರೆಯಾಗಬಾರದೆಂದು ಪೂಜೆ ಮಾಡಿದ್ದೇವೆ. ಬೆಳಗ್ಗೆ ವಿಧಿ ವಿಧಾನ ಮಾಡುವಾಗ ನಾವು ಇದೆಲ್ಲಾ ಅವನಿಗೆ ಮಾಡ್ಬೇಕಾ ಎನಿಸಿತು” ಎಂದು ಶಿವರಾಜ್ ಕುಮಾರ್ ಬೇಸರ ವ್ಯಕ್ತ ಪಡಿಸಿದರು.
ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಶಿವಣ್ಣ “ಪುನೀತ್ ಅಮರಶ್ರೀ….. ಆ ಶ್ರೀಗಿಂತ ಯಾವುದು ದೊಡ್ಡದಲ್ಲ ” ಎಂದು ಶಿವಣ್ಣ ಹೇಳಿದರು.