ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯ 174 ಗ್ರಾಮಗಳು ಕೊರೊನಾ ಮುಕ್ತ
ಚಾಮರಾಜನಗರ : ಕೊರೋನಾ ಸೋಂಕು ಎರಡನೇ ಅಲೆಯಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲೇ ಹೆಚ್ಚು ವ್ಯಾಪಿಸಿದೆ. ಹಳ್ಳಿ ಹಳ್ಳಿಗಳಿಗೂ ತನ್ನ ಕಬಂಧ ಬಾಹು ಚಾಚಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಶೇಖಡಾ 70 ಕ್ಕು ಹೆಚ್ಚು ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ಕಂಡು ಬರುತ್ತಿದ್ದು, ಕೊರೋನಾ ಅಬ್ಬರದ ನಡುವೆಯು ಚಾಮರಾಜನಗರ ಜಿಲ್ಲೆಯಲ್ಲಿ 174 ಹಳ್ಳಿಗಳು ಕೊರೋನಾ ಮುಕ್ತವಾಗಿವೆ. ಸೋಂಕಿನಿಂದ ಗುಣಮುಖರಾಗಿ ಪ್ರಸ್ತುತ ಯಾವುದೇ ಪ್ರಕರಣಗಳಿಲ್ಲದ ಹಾಗು ಇದುವರೆಗು ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣ ದಾಖಲಾಗದ ಗ್ರಾಮಗಳು ಇದರಲ್ಲಿ ಸೇರಿವೆ.
ವಿಶೇಷ ಎಂದರೆ ಬುಡಕಟ್ಟು ಸೋಲಿಗರೇ ವಾಸಿಸುವ ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಚಾಮರಾಜನಗರ ತಾಲೂಕಿನ 61, ಹನೂರು ತಾಲೂಕಿನ 65, ಗುಂಡ್ಲುಪೇಟೆ ತಾಲೂಕಿನ 24, ಕೊಳ್ಳೇಗಾಲ ತಾಲೂಕಿನ 15 ಹಾಗೂ ಯಳಂದೂರು ತಾಲೂಕಿನ 9 ಹಳ್ಳಿಗಳಲ್ಲಿ ಪ್ರಸ್ತುತ ದಿನದವರೆಗು ಯಾವುದೇ ಕೊರೋನಾ ಪ್ರಕರಣ ವರದಿಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಚಾಮರಾಜನಗರ ತಾಲೂಕಿನ 61 ಗ್ರಾಮಗಳು ಕೊರೋನಾಮುಕ್ತವಾಗಿದ್ದು, ಅದರಲ್ಲಿ ಕಾಡಂಚಿನಲ್ಲಿರುವ ಪುಣಜನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಡಕಟ್ಟು ಸೋಲಿಗರೇ ಇರುವ ಬೆಜ್ಜಲಪಾಳ್ಯ, ಬಾನವಾಡಿ, ಎತ್ತೆಗೌಡನದೊಡ್ಡಿ, ಕನ್ನೇರಿಕಾಲೋನಿ, ಶ್ರೀನಿವಾಸಪುರ ಕಾಲೋನಿ ಸೇರಿದಂತೆ 20 ಕ್ಕು ಹೆಚ್ಚು ಗಿರಿಜನರ ಹಾಡಿಗಳು ಕೊರೋನಾ ಮುಕ್ತವಾಗಿವೆ. ಇನ್ನೂ ಹನೂರು ತಾಲೋಕಿನಲ್ಲಿ 65 ಗ್ರಾಮಗಳು ಕೋವಿಡ್-19 ಗೆ ಸೆಡ್ಡು ಹೊಡೆದಿದ್ದು, ಇಲ್ಲಿಯು ಸಹ ಕಾಡಂಚಿನ ಗ್ರಾಮಗಳು ಹಾಗು ಗಿರಿಜನರು ವಾಸಿಸುವ ಹಳ್ಳಿಗಳೇ ಹೆಚ್ಚಾಗಿ ಕೊರೋನಾ ಮುಕ್ತವಾಗಿವೆ. ಹಾಗೆಯೇ ಯಳಂದೂರು ತಾಲೂಕಿನಲ್ಲಿ 9 ಹಳ್ಳಿಗಳು ಕೊರೋನಾ ವೈರಸ್ ನಿಂದ ಮುಕ್ತವಾಗಿದ್ದು ಇಲ್ಲಿಯು ಸಹ ಕಾಡಂಚಿನ ಹಾಗು ಬುಡಕಟ್ಟು ಸೋಲಿಗರೇ ಇರುವ ಗ್ರಾಮಗಳು ಮೇಲುಗೈ ಸಾಧಿಸಿವೆ.
ಗುಂಡ್ಲುಪೇಟೆ ತಾಲೂಕಿನ 24 ಹಳ್ಳಿಗಳು ಹಾಗು ಕೊಳ್ಳೇಗಾಲ ತಾಲೂಕಿನ 15 ಗ್ರಾಮಗಳಲ್ಲಿ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಇಲ್ಲಿಯು ಸಹ ಕಾಡಂಚಿನ ಗ್ರಾಮಗಳೇ ಹೆಚ್ಚಾಗಿ ಕೋವಿಡ್ -19 ನಿಂದ ಮುಕ್ತವಾಗಿವೆ. ಜಿಲ್ಲೆಯ 130 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲು ಕೊರೋನಾ ಸೋಂಕು ಹಬ್ಬಿದ್ದರೂ ಈ ನಡುವೆಯು 174 ಗ್ರಾಮಗಳು ಸದ್ಯಕ್ಕೆ ಕೊರೋನಾಮುಕ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಾಡಿನ ವಾತಾವರಣ, ಕಾಡಂಚಿನ ಜನರ ರೋಗ ನಿರೋಧಕ ಶಕ್ತಿ, ಲಾಕ್ ಡೌನ್ ಪರಿಣಾಮ ಸಂಪರ್ಕ ಕಡಿತ, ಜಿಲ್ಲಾಡಳಿತ ಇತ್ತೀಚೆಗೆ ಕೈಗೊಂಡಿರುವ ಕೊರೋನಾ ಮುಕ್ತ ಗ್ರಾಮ ಅಭಿಯಾನ, ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ನಿಯಂತ್ರಣ ಮಾಡಲು ಕೋವಿಡ್ ಕ್ಯಾಪ್ಟನ್ ಗಳ ನೇಮಕ, ಇತ್ತೀಚೆಗೆ ಹೋಂ ಐಸೋಲೇಷನ್ ಗೆ ಹೆಚ್ಚು ಅವಕಾಶ ನೀಡದಿರುವುದು ಇವೇ ಮುಂತಾದ ಕಾರಣಗಳಿಂದ ಈ ಗ್ರಾಮಗಳು ಸದ್ಯಕ್ಕೆ ಕೊರೋನಾ ಮುಕ್ತವಾಗಿರಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 28 ಮಂದಿ ಕೊರೋನಾ ಸೋಂಕಿತರು ಒಂದೇ ರಾತ್ರಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಕೊರೋನಾ ಸೋಂಕು ಮುಕ್ತ ಹಾಗೂ ಸಾವಿನ ವರದಿ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಿದೆ.