ಕುಡಿದ ಮತ್ತಿನಲ್ಲಿ ಮದುವೆಯಾದ ಯುವಕರಿಬ್ಬರು, ನಂತರ ಸಂಸಾರ ನಡೆಸುವಂತೆ ಯುವಕನ ಪಟ್ಟು
ಕುಡಿದ ಮತ್ತಿನಲ್ಲಿ ಯುವಕರಿಬ್ಬರ ಮಧ್ಯೆ ಮದುವೆ ನಡೆದಿದ್ದು, ತಾಳಿ ಕಟ್ಟಿಸಿಕೊಂಡಿರುವ ಯುವಕ ಆತನೊಂದಿಗೆ ಸಂಸಾರ ಮಾಡುವುದಾಗಿ ಹಠ ಹಿಡಿದಿದ್ದ ವಿಚಿತ್ರ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ಮೇದಕ್ ಜಿಲ್ಲೆಯ ಚಿಲಪ್ಚೆಡ್ ತಾಲೂಕಿನ ಚಂದೂರಿನ ನಿವಾಸಿ 22 ವರ್ಷದ ಆಟೋ ಡ್ರೈವರ್ಗೆ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟೆಯ 21 ವರ್ಷದ ಯುವಕನ ಮಧ್ಯೆ ಮದುವೆಯಾಗಿದೆ. ದುಂಪಲಕುಂಟಾದ ಸೇಂದಿ ಅಂಗಡಿಯಲ್ಲಿ ಕುಡಿಯುವಾಗ ಇಬ್ಬರ ಮಧ್ಯೆ ಪರಿಚಯ ಆಗಿದೆ. ಅಂದಿನಿಂದ ಇಬ್ಬರು ಸೇಂಧಿ ದೋಸ್ತರಾಗಿದ್ರು.
ಈ ತಿಂಗಳ 1ನೇ ದಿನಾಕದಂದು ಇಬ್ಬರು ಕಂಠ ಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಚಂದೂರ್ ಯುವಕನೊಂದಿಗೆ ಜೋಗಿಪೇಟೆ ಯುವಕ ತಾಳಿ ಕಟ್ಟಿಸಿಕೊಂಡಿದ್ದಾನೆ. ತಾಳಿ ಕಟ್ಟಿಸಿಕೊಂಡ ಜೋಗಿಪೇಟೆ ಯುವಕ ಸಂಸಾರ ಮಾಡುವುದಕ್ಕೆ ಮುಂದಾಗಿದ್ದಾನೆ. ಚಂದೂರ್ ಯುವಕನೇ ನನ್ನ ಗಂಡ ಎಂದು ಆತನ ಮನೆಗೆ ಸಂಸಾರಕ್ಕೆ ಹೋಗಿದ್ದಾನೆ. ಅಲ್ಲಿ ಚಂದೂರ್ ಯುವಕ ಪೋಷಕರು ಜೋಗಿಪೇಟೆ ಯುವಕನಿಗೆ ಬುದ್ಧಿ ಮಾತು ಹೇಳಿದ್ದಾರೆ. ಬುದ್ದಿಮಾತು ಕೇಳದೆ ಜೋಗಿಪೇಟೆ ಯುವಕ ಸಂಸಾರ ಮಾಡುವುದಾಗಿ ಹಠ ಹಿಡಿದಿದ್ದಾನೆ.
ಚಂದೂರ್ ಯುವಕನ ಪೋಷಕರು ಜೋಗಿಪೇಟೆ ಯುವಕನಿಗೆ ಏಟು ಕೊಟ್ಟು ಕಳುಹಿಸಿದ್ದಾರೆ. ಆ ಯುವಕ ನೇರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪೊಲೀಸರು ಯುವಕನಿಗೆ ಬುದ್ದಿವಾದ ಹೇಳಿದ್ದಾರೆ. ಆಗ ಜೋಗಿಪೇಟೆ ಯುವಕ 1 ಲಕ್ಷ ರೂಪಾಯಿ ಕೊಟ್ರೆ ಮಾತ್ರ ದೂರು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.
ಸುಮಾರು ಗಂಟೆಗಳ ಕಾಲ ಪೊಲೀಸರು, ಗ್ರಾಮದ ಹಿರಿಯರು ಮತ್ತು ಇಬ್ಬರು ಯುವಕರ ಪೋಷಕರು ಸೇರಿ ಪಂಚಾಯ್ತಿ ನಡೆಸಿದ್ದಾರೆ. ಪಂಚಾಯ್ತಿಯಲ್ಲಿ ಜೋಗಿಪೇಟೆ ಕುಟುಂಬಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡುವುದರ ಮೂಲಕ ಈ ಪ್ರಕರಣ ಅಂತ್ಯ ಕಂಡಿದೆ.