ಗುರು ರಾಘವೇಂದ್ರ ಬ್ಯಾಂಕ್ ಹಗರಣಕ್ಕೆ 2 ವರ್ಷ :ಪ್ರಧಾನಿಗೆ ಪತ್ರ ಚಳುವಳಿ
ಬೆಂಗಳೂರು : ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಇಂದಿಗೆ ಎರಡು ವರ್ಷಗಳಾದರೂ ಈ ವರೆಗೂ ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿಲ್ಲ. ಹೀಗಾಗಿ ವಂಚನೆಗೆ ಒಳಗಾದ ಠೇವಣಿದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ಆರಂಭಿಸಿದ್ದಾರೆ.
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕರಾದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಅವರ ನೇತತ್ವದಲ್ಲಿ ಇಂದು ಬೆಳಿಗ್ಗೆ
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನ ಬಳಿ ಠೇವಣಿದಾರರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು, ಇಂದು ಅತ್ಯಂತ ಕರಾಳ ದಿನ. ಇವತ್ತು ಸಾವಿರಾರು ಜನ ಯುವಕರು ಬಲವಂತವಾಗಿ ಓದುವುದನ್ನ ಬಿಟ್ಟು ಕೆಲಸಕ್ಕೆ ಬರಲಿಕ್ಕೆ ನಾಂದಿ ಹಾಡಿದಂತಹ ದಿನ.
ನೂರು ಜನರಿಗೆ ಸಾವನ್ನು ಕೊಟ್ಟಂತಹ ದಿನ. ಸಾವಿರಾರು ಮಂದಿಯ ಬದುಕು ಶೂನ್ಯವಾದ ದಿನ.. ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಕೆಲಸಕ್ಕೆ ಸೇರಿದ ದಿನ. ಇಂದಿಗೆ ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಇಂದಿಗೆ ಎರಡು ವರ್ಷಗಳಾಯ್ತು. ನೂರು ಜನ ಪ್ರಾಣ ಕಳೆದುಕೊಂಡಿದ್ದು ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ದೈನಂದಿನ ಜೀವನ ನಿರ್ವಹಣೆ ನಡೆಸಲಾಗದೆ ಹಲವರು ಪರದಾಡುತ್ತಿದ್ದರೆ, ನೂರಾರು ಮದುವೆ ಶುಭಕಾರ್ಯಗಳು ನಿಂತುಹೋಗಿವೆ. ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದೆ ಕೆಲಸಕ್ಕೆ ಕಳುಹಿಸಬೇಕಾದ ಪರಿಸ್ಥಿತಿ ಬಂದಿದೆ. ಎರಡು ವರ್ಷಗಳಾದ ನಂತರೂ ಸಿಕ್ಕ ಪರಿಹಾರ ಅಲ್ಪಪ್ರಮಾಣದಷ್ಟೇ. 5ಲಕ್ಷದ DICGC ವಿಮೆ ಹಣ ಬಂದಿರುವುದು ಸಂತೋಷ. ಆದರೆ ಅದಕ್ಕೂ ಎರಡು ವರ್ಷ ಬೇಕಾಯಿತು. ಈ ಎರಡು ವರ್ಷದ ಅವಧಿಯಲ್ಲಿ ಸಾಕಷ್ಟು ಜನ ದಿನನಿತ್ಯ ಜೀವನ ನಡೆಸಲು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಎಷ್ಟೋ ಜನ ಸ್ವಂತ ಮನೆ ಕಟ್ಟಬೇಕೆಂಬ ಆಸೆಯಿಂದ ಉಳಿತಾಯ ಮಾಡಿದ್ದ ಹಣವನ್ನು ಕಳೆದುಕೊಂಡ ದುಃಖದಲ್ಲಿ ಜೀವ ಬಿಟ್ಟಿದ್ದಾರೆ. 5ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಠೇವಣಿ ಇಟ್ಟವರಿಗೆ ಪರಿಹಾರ ಯಾವಾಗ, ಹೇಗೆ ಸಿಗುತ್ತೆ ಎಂಬುದರ ಬಗ್ಗೆ ಸ್ಥಳೀಯ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ತನಿಖೆ ನಡೆಯುತ್ತಿದೆಯೋ, ಇಲ್ಲವೋ ಎಂಬ ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಗರಣದಲ್ಲಿ ಠೇವಣಿದಾರರಿಗೆ ಹಣ ವಾಪಸ್ ಕೊಡಿಸುವುದು ಎಷ್ಟು ಮುಖ್ಯವೋ ಸರಿಯಾದ ತನಿಖೆ ನಡೆಸಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವುದು ಸಹ ಅಷ್ಟೇ ಮುಖ್ಯ. ಏಕೆಂದರೆ ಮತ್ತೊಮ್ಮೆ ಯಾರೂ ಇಂತಹ ಕೃತ್ಯಕ್ಕೆ ಕೈ ಹಾಕಬಾರದು ಎಂಬ ಸಂದೇಶ ಕೊಡಬೇಕಾಗಿದೆ. ವಿಮೆ ಹಣ ಸಾರ್ವಜನಿಕರ ಹಣ DICGC ಸಂಸ್ಥೆಯಲ್ಲಿ ಎಲ್ಲಾ ಬ್ಯಾಂಕುಗಳು 12 ಪೈಸೆ ಪ್ರೀಮಿಯಂ ಕಟ್ಟಿದ್ದು ಇಂದು 135000 ಕೋಟಿಯಷ್ಟು ಹಣ ಹೂಡಿಕೆಯಾಗಿದೆ. ವಿಮೆ ಹಣವನ್ನು ಠೇವಣಿದಾರರಿಗೆ ಹಂಚಿ ಸ್ವಯಂ ಮೆಚ್ಚುಗೆ ಸಮಾರಂಭ ಏರ್ಪಡಿಸಿಕೊಂಡಿದ್ದ ಸಂಸದರು ಮತ್ತು ಶಾಸಕರ ಜನಪರ ಕಾಳಜಿ ಎಂತಹುದು ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಕಿಡಿಕಾರಿದರು.
ಮತ್ತೆ ಸಮ್ಮ ಸ್ಥಳೀಯರು, ಶಾಸಕರು , ತನಿಖೆ ಬಗ್ಗೆ ಮಾತನಾಡದೇ ಇರೋದು ನಮಗೆಲ್ಲಾ ತೀರ ಬೇಸರ.. 2 ವರ್ಷಗಳೇ ಕಳೆದ್ರೂ ಈ ಬಗ್ಗೆ ಅವರು ಮಾತನಾಡದೇ ಇರೋದು ಅನುಮಾನನೂ ಮೂಡ್ತಿದೆ ಎಂದರು.
ಈ ಪ್ರಕರಣ ತಾರ್ಕಿಕ ಅಂತ್ಯ ಕಾನುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ. ನಾನು ಯಾವುದೇ ಕಾರಣಕ್ಕೂ ಹಿಂದೇಟು ಹಾಕಲ್ಲ. ಯಾರ ಒತ್ತಡಕ್ಕೂ ಮಣಿಯುವದಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸುವುದನ್ನು ಬಿಟ್ಟು ರಾಜಕೀಯ ಒತ್ತಡ ತಂದು ತನಿಖೆಯ ದಿಕ್ಕು ತಪ್ಪಿಸುತ್ತಿರುವ ಕಾರ್ಯ ಖಂಡನಾರ್ಹ. ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಜನಪರ ಕಾಳಜಿ ಇಲ್ಲದಿರುವುದು, ನಿರ್ಲಕ್ಷ್ಯ ಮನೋಭಾವನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ತಿಳಿಸಿ, ಶೀಘ್ರದಲ್ಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ಠೇವಣಿದಾರರ ಪೂರ್ಣ ಹಣವನ್ನು ತಕ್ಷಣ ಅವರಿಗೆ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ಇವತ್ತು ಒಂದು ಸಾವಿರ ಜನರು ಬೇರೆ ಬೇರೆ ಕಡೆಗಳಿಂದ ಪ್ರಧಾನ ಮಂತ್ರಿಗಳಿಗೆ ಪತ್ರವನ್ನು ಬರೆದು ನಾವು ಪಟ್ಟಿರುವಂತಹ ಕಷ್ಟಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿ ಕೊಡಲಿದ್ದೇವೆ. ಆ ಮೂಲಕ ಸ್ಥಳೀಯ ಸಂಸದರು ಮತ್ತು ಶಾಸಕರು ಅವರ ನಿರ್ಲಕ್ಷ್ಯವನ್ನು ಪ್ರಧಾನಿಗಳ ಗಮನಕ್ಕೆ ತೆಗೆದುಕೊಂಡು ಹೋಗಿ ಆದಷ್ಟು ಬೇಗ ಬೇರೆ ಬ್ಯಾಂಕುಗಳು ಯಾವ ರೀತಿ ಲಕ್ಷ್ಮಿ ವಿಲಾಸ್ ಬ್ಯಾಂಕ್ , ಪಿಎಮ್ ಸಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಗಳನ್ನ ಹೇಗೆ ಅವರು ಶೀಘ್ರದಲ್ಲೇ ಪರಿಹಾರ ಮಾಡಿದರೋ ಅದೇ ತರಹ ಒಂದು ಪರಿಹಾರ ಇಲ್ಲೂ ಕೊಡಬೇಕು .. ಸೊಸೈಟಿಗಳಿಗೂ ಆದಷ್ಟು ಬೇಗ ಪರಿಹಾರ ಕೊಡಬೇಕು ಎಂದು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಇದೇ ವೇಳೆ ಶಂಕರ್ ಗುಹಾ ಅವ್ರು ಒಂದು ವಿನೂತನವಾಗಿ ಗೋವಿಂದ ಗೋವಿಂದ ಎನ್ನುವ ನಗರ ಸಂಕಷ್ಟ ಕೀರ್ತನೆ ಹಾಡಿದರು.
ಇದಾದ ಬಳಿಕ ನೂರಾರು ಠೇವಣಿದಾರರು ಮೆರವಣಿಗೆ ಮೂಲಕ ಹೋಗಿ ಬಸವನಗುಡಿ ಪೋಸ್ಟ್ ಆಫೀಸ್ ನಲ್ಲಿ ಪ್ರಧಾನಿಗಳ ಕಚೇರಿಗೆ ಪತ್ರಗಳನ್ನು ಪೋಸ್ಟ್ ಮಾಡಿದರು.