ಬ್ಯಾಂಕ್ ಆಫ್ ಇಂಡಿಯಾದ ಲಾಕರ್ ನಲ್ಲಿದೆ 2011ರ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದ ಚೆಂಡು..!
2011ರ ವಿಶ್ವಕಪ್ ಫೈನಲ್ ಪಂದ್ಯದ ಚೆಂಡು ಎಲ್ಲಿದೆ ಗೊತ್ತಾ ?
ಗೆಲುವಿನ ರನ್ ಗಾಗಿ ಸಿಕ್ಸರ್ ಬಾರಿಸಿದ್ದ ಆ ಚೆಂಡು ಧೋನಿ ಕೈಗೆ ಯಾವಾಗ ಸೇರುತ್ತೆ ?
2011 World Cup-winning ball and Praveen Shinde
ಏಪ್ರಿಲ್ 2, 2011.. ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ದಿನ. ಶ್ರೀಲಂಕಾ ವಿರುದ್ಧದ ಫೈನಲ್ ನಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿ 28 ವರ್ಷಗಳ ಬರವನ್ನು ನೀಗಿಸಿದ ಕ್ಷಣ. ನುವಾನ್ ಕುಲಸೇಕರ ಅವರ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಅವಿಸ್ಮರಣೀಯ ಘಟನೆ. ತೀಕ್ಷ್ಣ ಕಣ್ಣಿನ ನೋಟದೊಂದಿಗೆ ಚೆಂಡನ್ನು ದಿಟ್ಟಿಸಿ ನೋಡುತ್ತಾ, ಬ್ಯಾಟ್ ಅನ್ನು ಗದೆಯನ್ನು ತಿರುಗಿಸುತ್ತಾ ಚಂಗನೇ ವಿಕೆಟ್ ಕಿತ್ತುಕೊಂಡು ಧೋನಿ ಗೆಲುವನ್ನು ಸಂಭ್ರಮಿಸಿದ ಕ್ಷಣವನ್ನು ಎಂದಾದ್ರೂ ಮರೆಯುವುದುಂಟೆ..
ಅಬ್ಬಾ.. ಮಹೇಂದ್ರ ಸಿಂಗ್ ಧೋನಿಯವರ ಆ ಮಹೋನ್ನತ ಇನಿಂಗ್ಸ್ ಅನ್ನು ನೆನಪಿಸಿಕೊಂಡಾಗ ಇಂದಿಗೂ ರಪ್ಪನೆ ಒಂದು ಕ್ಷಣ ಹಾದು ಹೋಗುತ್ತೆ ಆ ಸಿಕ್ಸರ್.
ಹೌದು, ಸರಿಯಾಗಿ 10 ವರ್ಷಗಳ ಹಿಂದೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿಸಿತ್ತು. 1983ರಲ್ಲಿ ಕಪಿಲ್ ಡೆವಿಲ್ಸ್ ಮಾಡಿದ್ದ ಸಾಧನೆಯನ್ನು ಧೋನಿ ಹುಡುಗರು 28 ವರ್ಷಗಳ ಬಳಿಕ ಕ್ರಿಕೆಟ್ ಅಭಿಮಾನಿಗಳು ಕುಣಿದಾಡುವಂತೆ ಮಾಡಿದ್ದರು.
ಈ ವಿಶ್ವಕಪ್ ಗೆಲುವನ್ನು ಪ್ರತಿ ವರ್ಷ ನೆನಪಿಸಿಕೊಂಡು ಗತಕಾಲದ ವೈಭವವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಕ್ರಿಕೆಟಿಗರು.
ಅಚ್ಚರಿಯಂದ್ರೆ ಅವತ್ತು ಧೋನಿ ಸಿಕ್ಸರ್ ಬಾರಿಸಿದ್ದ ಚೆಂಡು, ವಿಶ್ವ ಕಪ್ ಫೈನಲ್ ಪಂದ್ಯದ ಚೆಂಡು ಯಾರ ಬಳಿ ಇದೆ, ಎಲ್ಲಿಗೆ ಹೋಯ್ತು ಎಂಬುದು ಯಾರಿಗೂ ಗೊತ್ತೆ ಇಲ್ಲ. ಈ ಚೆಂಡಿನ ಹುಡುಕಾಟವನ್ನು ಮುಂಬೈ ಕ್ರಿಕೆಟ್ ಸಂಸ್ಥೆಯು ಮಾಡಿತ್ತು. ಆದ್ರೆ ಪ್ರಯೋಜನವಾಗಿಲ್ಲ. ಅದು ಧೋನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಹಾಗಿದ್ರೆ ಆ ಚೆಂಡು ಎಲ್ಲಿದೆ, ಯಾರ ಬಳಿ ಇದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸುತ್ತಿದ್ದಂತೆ ವಾಂಖೇಡೆ ಮೈದಾನದಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಆಟಗಾರರು ಮೈದಾನಕ್ಕೆ ಓಡೋಡಿ ಬಂದು ಸಂಭ್ರಮಾಚರಣೆಯಲ್ಲಿ ಮುಳುಗಿ ಹೊಗಿದ್ದರು. ಟೀಮ್ ಇಂಡಿಯಾ ಆಟಗಾರರು ಗೆಲುವಿನ ಆಮಲಿನಲ್ಲಿ ತಮ್ಮನ್ನು ತಾವೇ ಮರೆತು ಹೋಗಿದ್ದರು. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದರು.
ಆದ್ರೆ ಧೋನಿ ಸಿಕ್ಸರ್ ಬಾರಿಸಿದ್ದ ಚೆಂಡು ಡ್ರೆಸಿಂಗ್ ರೂಮ್ ಬಳಿಯ ಪೆವಿಲಿಯನ್ ಸೇರಿಕೊಂಡಿತ್ತು. ಎಲ್ಲರೂ ಖುಷಿಯಲ್ಲಿ ತೇಲಾಡುತ್ತಿದ್ರೆ ಅಲ್ಲಿದ್ದ ಒಬ್ರೂ ಮಾತ್ರ ಈ ಚೆಂಡಿನ ಮಹತ್ವ ಏನು ಎಂಬುದನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡಿದ್ದರು. ತಡ ಮಾಡದೇ ಚೆಂಡನ್ನು ತನ್ನ ಪಾಕೆಟ್ ನೊಳಗೆ ಹಾಕಿಕೊಂಡು ಸೈಲೆಂಟ್ ಆಗಿಯೇ ಧೋನಿಯ ಬಳಿ ಆಟೋಗ್ರಾಫ್ ಸಹಿ ಮಾಡಿಕೊಂಡಿದ್ದರು. ಬಳಿಕ ಈ ಚೆಂಡನ್ನು ನಾನು ನಿಮಗೆ ಕೊಡುತ್ತೇನೆ. ಆದ್ರೆ ಈಗಲ್ಲ. ನೀವು ನಿವೃತ್ತಿಯಾದ ಬಳಿಕ ಅಂತ ಮಾತು ಕೂಡ ಕೊಟ್ಟಿದ್ದರು.
ಆ ನಂತರ ಆ ಚೆಂಡಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಸಾಕಷ್ಟು ಶೋಧ ಕಾರ್ಯ ಕೂಡ ನಡೆಸಿತ್ತು. ನಂತರ ವಿಚಾರ ಕೂಡ ಗೊತ್ತಾಗಿ ಹೋಯ್ತು.
ಅಂದ ಹಾಗೇ ಆ ಚೆಂಡನ್ನು ಪಡೆದುಕೊಂಡು ಧೋನಿ ಸಹಿ ಮಾಡಿಕೊಂಡವರು ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಪ್ರವೀಣ್ ಶಿಂಧೆ. ಪ್ರವೀಣ್ ಶಿಂಧೆ ಅವರು ಮಾಜಿ ಅಂಪೈರ್ ಕೂಡ.
ಈ ಚೆಂಡು ಪ್ರವೀಣ್ ಶಿಂಧೆ ಕೈಯಲ್ಲಿದೆ ಅಂತ ಗೊತ್ತಾಗುತ್ತಿದ್ದಂತೆ ಈ ಅಮೂಲ್ಯವಾದ ಚೆಂಡನ್ನು ಪಡೆಯಲು ಸಾಕಷ್ಟು ಜನ ಮುಂದೆ ಬಂದಿದ್ದರು. ಕೆಲವರು ದುಡ್ಡು ಕೊಟ್ಟು ಖರೀದಿಸಲು ಕೂಡ ಮುಂದಾಗಿದ್ದರು.
ಹೌದು, ತುಂಬಾ ಜನ ದುಡ್ಡು ಕೊಡುತ್ತೇನೆ ಆ ಚೆಂಡನ್ನು ಕೊಡಿ ಅಂತ ನನ್ನ ಬಳಿ ಕೇಳಿಕೊಂಡಿದ್ದರು. ಆದ್ರೆ ನನಗೆ ದುಡ್ಡಿನ ಅವಶ್ಯಕತೆ ಇರಲಿಲ್ಲ. ದುಡ್ಡಿಗಾಗಿ ನಾನು ಈ ಅಮೂಲ್ಯವಾದ ಚೆಂಡನ್ನು ಕೊಡಲ್ಲ. ನಾನು ಧೋನಿಗೆ ಮಾತುಕೊಟ್ಟಿದ್ದೇನೆ. ನಿವೃತ್ತಿಯಾದ ನಂತರ ಈ ಚೆಂಡನ್ನು ನಿಮಗೆ ಕೊಡುತ್ತೇನೆ ಎಂದು. ನಾನು ಆ ಚೆಂಡನ್ನು ಭದ್ರವಾಗಿಟ್ಟುಕೊಂಡಿದ್ದೇನೆ ಅಂತಾರೆ ಪ್ರವೀಣ್ ಶಿಂಧೆ.
ಆ ಚೆಂಡಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಸಾಕಷ್ಟು ಶೋಧ ಕಾರ್ಯ ನಡೆಸಿತ್ತು. ಕೊನೆಗೆ ನಾನು ಮುಂಬೈ ಅಂಪೈರ್ ಮಾರ್ಕಸ್ ಕೌಟೊ ಬಳಿ ಹೇಳಿದ್ದೆ. ಆದ್ರೆ ನಾನು ಆ ಚೆಂಡನ್ನು ಕೊಡುವುದಿಲ್ಲ. ಧೋನಿಗೆ ಕೊಡುತ್ತೇನೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಶಿಂಧೆ.
ಪ್ರವೀಣ್ ಶಿಂಧೆ ಅವರು ಬ್ಯಾಂಕ್ ಆಫ್ ಇಂಡಿಯಾದಲ್ಲಿ 1979ರಿಂದ 2019ರ ತನಕ ಸೇವೆ ಸಲ್ಲಿಸಿದ್ದರು. ಅಂದ ಹಾಗೇ ಶಿಂಧೆ ಅವರು 2011ರ ವಿಶ್ವಕಪ್ ತಂಡದ ಎಲ್ಲಾ ಆಟಗಾರರ ಆಟೋಗ್ರಾಫ್ ಅನ್ನು ಪಡೆದುಕೊಂಡಿದ್ದಾರೆ. ಹಾಗೇ ಪಂದ್ಯದ ವೇಳೆ, ಐಪಿಎಲ್ ವೇಳೆ ಆಟಗಾರರ ಸಹಿ ಪಡೆದುಕೊಳ್ಳುವುದು ಪ್ರವೀಣ್ ಶಿಂಧೆ ಅವರ ಹವ್ಯಾಸ. ಆದ್ರೆ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಅವರ ಆಟೋಗ್ರಾಫ್ ಅನ್ನು ಮಾತ್ರ ಪಡೆದುಕೊಂಡಿಲ್ಲ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಪ್ರವೀಣ್ ಶಿಂಧೆ ಹೇಳುವುದು ಹೀಗೆ.. ಅದು 2012. ನಾನು ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಬಳಿ ಆಟೋಗ್ರಾಫ್ ಸಹಿ ಕೇಳಿದ್ದೆ. ಅವರು ನನ್ನ ಗುರುತಿಸಿದ್ದರು. ಯಾಕಂದ್ರೆ ಮುಂಬೈ ಕ್ರಿಕೆಟ್ ನಲ್ಲಿ ನನಗೆ ಅವರು ಚಿರಪರಿಚಿತರು. ಆದ್ರೆ ಅವರಿಬ್ಬರು ನನಗೆ ಅವಮಾನ ಮಾಡಿದ್ದರು. ನೀವು ಹಿರಿಯ ಅಂಪೈರ್. ಸರ್ ನಿಮಗೆ ಕಾಲ್ ಮಾಡುತ್ತೇವೆ. ಯಾವಾಗ ಆಟೋಗ್ರಾಫ್ ತೆಗೆದುಕೊಳ್ಳಬೇಕು ಎಂದು. ಇದು ನನಗೆ ಮುಜುಗರವಾಯ್ತು. ಆ ನಂತರ ನಾನು ಅವರ ಬಳಿ ಆಟೋಗ್ರಾಫ್ ಕೇಳಿಲ್ಲ ಎಂದು ತುಸು ಬೇಸರದಿಂದ ಹೇಳಿಕೊಳ್ಳುತ್ತಾರೆ ಶಿಂಧೆ.
ಒಟ್ಟಿನಲ್ಲಿ ಧೋನಿ ವಿಶ್ವಕಪ್ ಫೈನಲ್ ನಲ್ಲಿ ಸಿಡಿಸಿದ್ದ ಸಿಕ್ಸರ್ ಚೆಂಡು ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಉದ್ಯೋಗಿಯ ಲಾಕರ್ ನಲ್ಲಿ ಭದ್ರವಾಗಿದೆ.