ರೋಹಿತ್ ಗುಡುಗು.. ಯಾದವ್ ಮಿಂಚು.. ವಿರಾಟ್ ರನ್ ಮಳೆ.. ಪಾಂಡ್ಯ ಪ್ರವಾಹ : ಕೊಚ್ಚಿಹೋದ ಇಂಗ್ಲೆಂಡ್ 5th T 20 match India won by 36 runs
ರೋಹಿತ್ ಗುಡುಗು.. ಅಯ್ಯರ್ ಮಿಂಚು.. ವಿರಾಟ್ ರನ್ ಮಳೆ.. ಪಾಂಡ್ಯ ಪ್ರವಾಹ ಹೊಡೆತಕ್ಕೆ ನರೇಂದ್ರ ಮೋದಿ ಅಂಗಳದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಕೊಚ್ಚಿ ಹೋಗಿದೆ. ಇಂದಿನ ಪಂದ್ಯದಲ್ಲಿ ಭಾರತ 36 ರನ್ ಗಳಿಂದ ದಿಗ್ವಿಜಯ ಸಾಧಿಸಿದೆ. ಈ ಮೂಲಕ ಐದು ಮ್ಯಾಚ್ ಗಳ ಟಿ 20 ಸರಣಿಯಲ್ಲಿ 3-2 ಅಂತರಲ್ಲಿ ಟೀಂ ಇಂಡಿಯಾ ಸರಣಿಯನ್ನ ವಶಪಡಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ನಾಯಕ -ಉಪನಾಯಕ ಭದ್ರ ಬುನಾದಿ ಹಾಕಿದ್ರು. ಕೃಷ್ಣಾರ್ಜುನರಂತೆ ಮೋದಿ ಅಂಗಳದಲ್ಲಿ ಅಬ್ಬರಿಸಿದ ವಿರಾಟ್ – ರೋಹಿತ್ ಇಂಗ್ಲೆಂಡ್ ಬೌಲರ್ ಗಳನ್ನ ದಿಕ್ಕಾಪಾಲು ಮಾಡಿದ್ರು. ರೋಹಿತ್ ಸಿಡಿಲಬ್ಬರದ ಆಟ.. ಕೊಹ್ಲಿ ಸುನಾಮಿ ಬ್ಯಾಟಿಂಗ್ ಗೆ ಆಂಗ್ಲರು ಕಂಗಾಲಾಗಿ ಹೋದರು. ಅರ್ಜುನನಂತೆ ಇಂಗ್ಲೆಂಡ್ ಬೌಲರ್ ಗಳ ಮೇಲೆ ದಂಡಯಾತ್ರೆ ಮಾಡಿದ ರೋಹಿತ್ 34 ಎಸೆತಗಳಲ್ಲಿ 64 ರನ್ ಚಚ್ಚಿ ಔಟ್ ಆದ್ರು. ಇದಾದ ಬಳಿಕ ಟೀಂ ಇಂಡಿಯಾದ ಸಾರಥಿ ವಿರಾಟನ ಜೊತೆ ಸೇರಿದ ಸೂರ್ಯಕುಮಾರ್ ಯಾದವ್ ( 17 ಎಸೆತಕ್ಕೆ 32 ರನ್) ಮಿಂಚಿನಂತೆ ರನ್ ಗಳಿಸಿದ್ರು. ಈ ಮಧ್ಯೆ ಕೃಷ್ಣ ನಂತೆ ಚಾಣುಕ್ಯನ ಆಟವಾಡುತ್ತಿದ್ದ ಕೊಹ್ಲಿ ಅರ್ಧ ಶತಕ ದಾಖಲಿಸಿ ಮಿಂಚಿದ್ರು. ಅಂತಿಮ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯ ( 17 ಎಸೆತಕ್ಕೆ 37 ) ಭೀಮನಂತೆ ಅಬ್ಬರಿಸಿ ಬೊಬ್ಬಿರದರೇ ಕೊಹ್ಲಿ (52 ಎಸೆತಕ್ಕೆ 80 ರನ್) ವಿರಾಟನ ರೂಪ ತೋರಿಸಿದರು. ಪರಿಣಾಮ ನಿಗದಿತ 20 ಓವರ್ ಗಳಲ್ಲಿ ಟೀಂ ಇಂಡಿಯಾ ಬರೋಬ್ಬರಿ 224 ರನ್ ಗಳನ್ನ ದಾಖಲಿಸಿತು.
ಈ ಬೃಹತ್ ಮೊತ್ತವನ್ನ ಬೆನ್ನತ್ತಿದ ಇಂಗ್ಲೆಂಡ್ ಗೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಆಘಾತ ನೀಡಿದ್ರು. ಮೊದಲ ಓವರ್ ನಲ್ಲೇ ರಾಯ್ ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಬಳಿಕ ಜೋಸ್ ಬಟ್ಲರ್ ( 52), ದೇವಿಡ್ ಮಲಾನ್ (68) ಭಾರತೀಯ ಬೌಲರ್ ಗಳನ್ನ ಕಾಡಿದ್ರು. ಒಂದು ಹಂತದಲ್ಲಿ ಮ್ಯಾಚ್ ಟೀಂ ಇಂಡಿಯಾದ ಕೈ ಜಾರಿ ಇಂಗ್ಲೆಂಡ್ ಕೈಗೆ ಸೇರಿತ್ತು. ಈ ಹಂತದಲ್ಲಿ ಮತ್ತೆ ದಾಳಿಗೆ ಬಂದ ಭುವಿ ಬಟ್ಲರ್ ವಿಕೆಟ್ ಪಡೆದು ಭಾರತಕ್ಕೆ ಬ್ರೇಕ್ ನೀಡಿದ್ರು. ಇದೇ ಜೋಷ್ ನಲ್ಲಿ ಬೌಲಿಂಗ್ ಮಾಡಿದ ಶರ್ದೂಲ್ ಠಾಕೂರ್, ಕ್ರೀಸ್ ಗೆ ಕಚ್ಚಿನಿಂತು ಬ್ಯಾಟ್ ಬೀಸುತ್ತಿದ್ದ ಮಲಾನ್ ಅವರನ್ನ ಕ್ಲೀನ್ ಬೋಲ್ಡ್ ಮಾಡಿದ್ರು. ಇದಾದ ಬಳಿಕ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನ ಒಬ್ಬರ ಹಿಂದೆ ಒಬ್ಬರಂತೆ ಪೆವೀಲಿಯನ್ ಗೆ ಕಳುಹಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಕಳೆದುಕೊಂಡು 188 ರನ್ ಗಳಿಸು ಅಷ್ಟೆ ಶಕ್ತವಾಯಿತು. ಭಾರತ 36 ರನ್ ಗಳಿಂದ ಪಂದ್ಯವನ್ನ ಗೆದ್ದು ಸರಣಿಯನ್ನ ವಶಪಡಿಕೊಂಡಿತು.
ಭಾರತದ ಪರ ಭುವಿ 2 ವಿಕೆಟ್, ಶಾರ್ದೂಲ್ ಠಾಕೂರ್ 3 ವಿಕೆಟ್, ಹಾರ್ಧಿಕ್ ಪಾಂಡ್ಯ, ನಟರಾಜನ್ ತಲಾ ಒಂದು ವಿಕೆಟ್ ಪಡೆದರು.