ಬೊಮ್ಮಾಯಿ ಅವರೇ, ರಾಜ್ಯವನ್ನು ಕತ್ತಲಿಗೆ ತಳ್ಳುವ ಬಯಕೆ ಏಕೆ : ಕಾಂಗ್ರೆಸ್ Bangalore saaksha tv
ಬೆಂಗಳೂರು : ಬೊಮ್ಮಾಯಿ ಅವರೇ, ಜನರಿಂದ ಸತ್ಯ ಮರೆಮಾಚಿ ರಾಜ್ಯವನ್ನು ಕತ್ತಲೆಗೆ ತಳ್ಳುವ ಬಯಕೆ ಏಕೆ ಎಂದು ವಿದ್ಯುತ್ ಕಡಿತ ವಿಚಾರವಾಗಿ ರಾಜ್ಯ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಕಲ್ಲಿದ್ದಲು ಅಭಾವದ ಸಮಸ್ಯೆಯಾಗಿಲ್ಲ. ಹೀಗಾಗಿ ವಿದ್ಯುತ್ ಕಡಿತದ ಪ್ರಮೇಯ ಒದಗಿ ಬರುವುದಿಲ್ಲ. ಕಳೆದ ವಾರದಲ್ಲೂ ಕೂಡಾ ಇತರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುವ ಮೂಲಕ ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ ಎಂದು ದೂರಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿರುವ ರಾಜ್ಯ ಕಾಂಗ್ರೆಸ್, ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆಯೇ ಇಲ್ಲ ಎಂದಿದ್ದಾರೆ ಸಿಎಂ. ಕಲ್ಲಿದ್ದಲು ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ ಇಂಧನ ಸಚಿವರು. ಇಬ್ಬರ ಹೇಳಿಕೆಗಳಲ್ಲಿ ಸರ್ಕಾರದಲ್ಲಿನ ‘ಹೊಂದಾಣಿಕೆ ಕೊರತೆ’ ಕಾಣುತ್ತಿದೆ ಬೊಮ್ಮಾಯಿ ಅವರೇ, ಜನರಿಂದ ಸತ್ಯ ಮರೆಮಾಚಿ ರಾಜ್ಯವನ್ನು ಕತ್ತಲೆಗೆ ತಳ್ಳುವ ಬಯಕೆ ಏಕೆ ಎಂದು ಪ್ರಶ್ನಿಸಿದೆ.
ಇದೇ ವೇಳೆ ಪ್ರಹ್ಲಾದ್ ಜೋಶಿ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಮಳೆಯ ಕಾರಣದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ಪ್ರಹ್ಲಾದ್ ಜೋಶಿ ಅವರ ಹೇಳಿಕೆ ಹಾಸ್ಯಮಯವಾಗಿದೆ!
ಮಳೆ ಇದೇ ಮೊದಲ ಬಾರಿ ಬರುತ್ತಿದೆಯೇ ಸಚಿವರೇ? ಇಷ್ಟು ವರ್ಷಗಳಲ್ಲಿ ಉಂಟಾಗದ ಈ ದುಸ್ಥಿತಿ ಈಗ ಉದ್ಭವಿಸಿದ್ದು ‘ಅದಾನಿ ಸ್ನೇಹಿ’ ವಾತಾವರಣ ನಿರ್ಮಿಸುವ ನಿಮ್ಮ ಗುಪ್ತ ಉದ್ದೇಶದಿಂದಲ್ಲವೇ? ಸುಮ್ಮನೇ ಮಳೆಯನ್ನೇಕೆ ದೂಷಿಸುತ್ತೀರಿ ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.