Chamarajanagar : ದಯಾಮರಣ ಕೋರಿದ ರೈತ ಕುಟುಂಬ
ಚಾಮರಾಜನಗರ : 7 ಲಕ್ಷ ಸಾಲಕ್ಕೆ 29 ಲಕ್ಷ ಲೆಕ್ಕ ತೋರಿಸಿ ರೈತನ ಕುಟುಂಬಕ್ಕೆ ಬ್ಯಾಂಕಿನ ಅಧಿಕಾರಿಗಳ ಕಿರುಕುಳ ನೀಡುತ್ತಿರುವ ಹಿನ್ನಲೆಯಲ್ಲಿ ರೈತ ಕುಟುಂಬವು ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ರೈತ ಗುಂಡಪ್ಪ ಹಾಗೂ ಗಿರೀಶ್ ಎಂಬುವವರೇ ದಯಾಮರಣ ಕೋರಿರುವ ರೈತರು.
ಬ್ಯಾಂಕಿನಿಂದ ಪಡೆದ ಸಾಲ ಮರುಪಾವತಿ ಮಾಡಲು ಕಾಲಾವಕಾಶ ಹಾಗೂ ಜಮೀನನ್ನು ಆನ್ ಲೈನ್ ಮೂಲಕ ಹರಾಜು ಮಾಡುವ ಪ್ರಕ್ರಿಯೆ ಕೂಡಲೇ ಕೈ ಬಿಡಬೇಕು. ಇಲ್ಲವಾದಲ್ಲಿ ದಯಾಮರಣ ನೀಡಬೇಕು ಎಂದು ಸಾಲ ಪಡೆದ ರೈತ ಕುಟುಂಬಸ್ಥರು, ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರವರಿಗೆ ದೂರು ನೀಡಿದ್ದಾರೆ.
ಈ ಬಡ ರೈತ ಕುಟುಂಬವು 2010 ರಲ್ಲಿ ಎರಡೂವರೆ ಎಕರೆ ಕೃಷಿ ಭೂಮಿಯ ಮೇಲೆ ಗುಂಡ್ಲುಪೇಟೆಯಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕಿನಿಂದ ಕೃಷಿಗಾಗಿ ಟ್ರ್ಯಾಕ್ಟರ್ ಖರೀದಿಸಲು 7 ಲಕ್ಷ ಸಾಲ ಮಾಡಿದ್ರು .
ಎರಡು ವರ್ಷಗಳು ಕಂತಿನ ರೂಪದಲ್ಲಿ ಹಣ ಪಾವತಿಸಿದ್ದಾರೆ. ನಂತರ ಕುಮಾರಸ್ವಾಮಿ ಸಿ.ಎಂ ಆಗಿದ್ದಾಗ 1.75 ಲಕ್ಷ ಸಾಲ ಮನ್ನಾ ಆಗಿತ್ತು. ಇದೀಗ 10 ವರ್ಷಕ್ಕೆ ಬಡ್ಡಿ ಚಕ್ರ ಬಡ್ಡಿ ಸೇರಿಸಿ 7 ಲಕ್ಷಕ್ಕೆ 29 ಲಕ್ಷ ಕಟ್ಟಬೇಕು ಎಂದು ಬ್ಯಾಂಕಿನವರು ರೈತನ ಮನೆ ಮುಂದೆ ನೋಟೀಸ್ ಅಂಟಿಸಿಹೋಗಿದ್ದಾರೆ.
ಇದರಿಂದ ಮನನೊಂದ ರೈತ ಕುಟುಂಬವು ಕಾಲಕಾಲಕ್ಕೆ ಮಳೆಯಾಗದೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಇದರ ನಡುವೆ ಕೋವಿಡ್ ಮಹಾಮಾರಿಯಿಂದ ನಾವು ಬದುಕಿರೋದೆ ಹೆಚ್ಚು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನಾವು ಸಾಲ ಕಟ್ಟಲು ಸಾಧ್ಯವಾಗ್ತಾ ಇಲ್ಲ ಹಾಗಾಗಿ ನಮಗೆ ದಯಾ ಮರಣ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.