ಅಂದು ”ಅದೇ ಕಣ್ಣು”… ಇಂದು ”ಅದೇ ಮುಖ”….!
ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.
ಹೊಸತನ ಹುಡುಕಾಟದ ನಿರ್ದೇಶಕ ಹಾಗೂ ಉದಯೋನ್ಮುಖ ನಟ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿ, ನಟಿಸುತ್ತಿರುವ ಅದೇ ಮುಖ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದೂ ಸಿನಿಮಾದ ಟೈಟಲ್ ನಿಂದ. ಆಶ್ಚರ್ಯವಾದರೂ ಇದು ಸತ್ಯ. ಸಿನಿಮಾ ಸೆಟ್ ಏರುವ ಮುನ್ನವೇ ಸಾಕಷ್ಟು ಸದ್ದು ಮಾಡಿದ ಚಿತ್ರದ ಟೈಟಲ್ ”ಅದೇ ಮುಖ”.
ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮುಖ ಇರುತ್ತದೆ. ಹಾಗೆಂದು ಇದು ಕೇವಲ ಒಂದು ಪಾತ್ರವಲ್ಲ. ಬರೋಬ್ಬರಿ ಏಳು ಪಾತ್ರ. ಒಂದಕ್ಕಿಂತ ಮತ್ತೊಂದು ಭಿನ್ನ, ವಿಶಿಷ್ಟ. ಕ್ಷಣ ಕ್ಷಣಕ್ಕೂ ಸಸ್ಪೆನ್ಸ್ ಹೆಚ್ಚಿಸುತ್ತಲೇ ಹೋಗುವಂತ ಚಿತ್ರವಾಗುವ ಎಲ್ಲಾ ಸಾಧ್ಯತೆ ಇದೆ. ಓರ್ವ ಕಲಾವಿದ ಏಳು ವಿಚಿತ್ರ ಪಾತ್ರಗಳಲ್ಲಿ ನಟಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ಗೆ ತೆಗೆದುಕೊಂಡು ಹೋಗಬೇಕೆಂಬ ಹಂಬಲವೂ ಇದೆ. ಇದಕ್ಕೆಲ್ಲಾ ಮೂಲ ಕಾರಣ ಚಿತ್ರದ ನಿರ್ದೇಶಕ ಕಂ ನಟ ಸಂದೇಶ್ ಶೆಟ್ಟಿ ಆಜ್ರಿ.
ಅದೇ ಮುಖ ಚಿತ್ರದ ಮೂಲ ವಾಕ್ಯ ಭಾವ ಸತ್ತಾಗ ಭಾವನೆ ಹುಟ್ಟಿತು ಎಂಬ ವಿಶಿಷ್ಟ ಕಲ್ಪನೆ ತಲೆಯಲ್ಲಿ ಬರುತ್ತಿದ್ದಂತೆ ಚಿತ್ರ ಬರೆಯಲು ಶುರು ಮಾಡಿದ್ದಾರೆ ಸಂದೇಶ್ ಶೆಟ್ಟಿ. ಇದಕ್ಕಾಗಿ ಸಾಕಷ್ಟು ತಲೆಕೆಡಿಸಿಕೊಂಡು ಸಾಕಷ್ಟು ಸಮಯ ತೆಗೆದುಕೊಂಡು ಕಥೆ ರೆಡಿ ಮಾಡಿದ್ದಾರೆ. ಈಗ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣವೂ ಸದ್ಯದಲ್ಲಿಯೇ ಆರಂಭವಾಗಲಿದೆ. ತಸ್ಮಯ್ ಪ್ರೊಡಕ್ಷನ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಂದೇಶ್ ಶೆಟ್ಟಿ ಕಥೆ ಹೇಳುತ್ತಿದ್ದಂತೆ ಹಿಂದೂ ಮುಂದೂ ನೋಡದೇ ಒಪ್ಪಿಕೊಂಡಿರುವುದು ಆಜ್ರಿ ಅವರ ಚಾಣಾಕ್ಷತನಕ್ಕೆ ಸಾಕ್ಷಿ. ಚಿತ್ರದ ಟೈಟಲ್ ಕೇಳುತ್ತಿದ್ದಂತೆ ಓಕೆ ಅಂದು ಬಿಟ್ಟಿದ್ದಾರೆ ನಿರ್ಮಾಪಕರು.
ಧರ್ಮಸಿಂಧು, ಆಧ್ಯಾತ್ಮಿಕ ಚಿಂತಕ ರಾಘವೇಂದ್ರ ಉಳ್ಳೂರ ಅವರು ಸಂಕ್ರಾಂತಿ ಹಬ್ಬದ ದಿನವೇ ಅದೇ ಮುಖ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಖ್ಯಾತ ಚಲನಚಿತ್ರ ನಟ ಕಂ ನಿರ್ಮಾಪಕ ದಿವಂ ಕುಂದರ್ ಕ್ಲಾಪ್ ಮಾಡಿದರು. ಉದ್ಯಮಿ, ನ್ಯಾಯವಾದಿ ವಿಜಯ್ ಶೆಟ್ಟಿ, ಕರುಣ್ ಕುಂದರ್, ಅಶ್ವಥ್, ಸುನೀಲ್, ಸುನೀಲ್ ಬೈಂದೂರು, ಪ್ರವೀಣ್ ಯಕ್ಷಿಮಠ ಮತ್ತಿತರರು ಹಾಜರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel