ವಿಜಯ್ ಹಜಾರೆ : ಸತತ ನಾಲ್ಕನೇ ಜಯ.. ಕ್ವಾರ್ಟರ್ ಫೈನಲ್ ಗೆ ಕರ್ನಾಟಕ ಲಗ್ಗೆ
ಬೆಂಗಳೂರು : ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಜಯದೊಂದಿಗೆ ಹಾಲಿ ಚಾಂಪಿಯನ್ ಕರ್ನಾಟಕ ಕ್ರಿಕೆಟ್ ತಂಡ ಎಂಟರಘಟ್ಟಕ್ಕೆರಿದೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಟೂರ್ನಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ರೈಲ್ವೇಸ್ ತಂಡವನ್ನು 10 ವಿಕೆಟ್ ಗಳಿಂದ ಸೋಲಿಸಿದೆ. ಇದರೊಂದಿಗೆ ಕರ್ನಾಟಕ ಕ್ರಿಕೆಟ್ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವಿನ ಕೇಕೆ ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಗೆ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದೆ.
ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಕರ್ನಾಟಕ ರೈಲ್ವೇಸ್ ತಂಡವನ್ನ ಬ್ಯಾಟಿಂಗ್ ಆಹ್ವಾನಿಸಿತು. ನಾಯಕನ ಆಯ್ಕೆಯನ್ನ ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಕರ್ನಾಟಕ ತಂಡದ ಬೌಲರ್ ಗಳು ಆರಂಭದಿಂದಲೇ ರೈಲ್ವೇಸ್ ಮೇಲೆ ಸವಾರಿ ಮಾಡಿದ್ರು. ಶ್ರೇಯಸ್ ಗೋಪಾಲ್ (41ಕ್ಕೆ 3) ಜೆ.ಸುಚಿತ್ (72ಕ್ಕೆ2 )ವೈಶಾಕ್ ವಿಜಯ್ ಕುಮಾರ್(59ಕ್ಕೆ 1) ಪ್ರಸಿದ್ಧ್ ಕೃಷ್ಣ (60ಕ್ಕೆ 1) ಮಿಥುನ್ (31ಕ್ಕೆ 1) ದಾಳಿ ತತ್ತರಿಸಿದ ರೈಲ್ವೇಸ್ ಪ್ರಥಮ್ ಸಿಂಗ್ ಅವರ ಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.
ಈ ಮೊತ್ತವನ್ನ ಬೆನ್ನಟ್ಟಿದ ಕರ್ನಾಟಕ ತಂಡ ದೇವದತ್ ಪಡಿಕಲ್ (145*ರನ್, 125 ಎಸೆತ, 9 ಬೌಂಡರಿ, 9 ಸಿಕ್ಸರ್) ಹಾಗೂ ಸಮರ್ಥ್.ಆರ್ (130*ರನ್, 118 ಎಸೆತ, 17 ಬೌಂಡರಿ) ಜೋಡಿಯ ಶತಕದಾಟದ ನೆರವಿನಿಂದ 40.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 ರನ್ ಪೇರಿಸಿ ಜಯದ ನಗೆ ಬೀರಿತು.
ಇದರೊಂದಿಗೆ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.