#BJPvsBJP ಆಂತರಿಕ ಕಲಹಕ್ಕೆ ಮೊದಲ ವಿಕೆಟ್ ಪತನ!
ಬೆಂಗಳೂರು : ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಅಂಗೀಕರಿಸಿದ್ದಾರೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ಕಾಲೆಳೆದಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನ ಮಾಡಿರುವ ಕಾಂಗ್ರೆಸ್, ಬಿಜೆಪಿ ವರ್ಸಸ್ ಬಿಜೆಪಿ ಆಂತರಿಕ ಕಲಹಕ್ಕೆ ಮೊದಲ ವಿಕೆಟ್ ಪತನ. ಧರ್ಮ, ಸಂಸ್ಕøತಿಯನ್ನು ಗುತ್ತಿಗೆ ತೆಗೆದುಕೊಂಡವರಂತೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿ ನಾಯಕರೇ ಹೇಳಿ, ನಿಮ್ಮ ಸರ್ಕಾರದ ಜಲಸಂಪನ್ಮೂಲ ಸಚಿವರು ರಾಜೀನಾಮೆ ನೀಡಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದೆ.
ಸರ್ಕಾರಕ್ಕೆ ಮುಜುಗರ ಬರುವ ಹಿನ್ನೆಲೆ ರಮೇಶ್ ಜಾರಕಿಹೊಳಿ ಹಿನ್ನೆಲೆ ಟ್ವೀಟ್ ಮಾಡಿ, ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಬಿಜೆಪಿಗೆ ಮುಜುಗರವೇ!. ಮುಜುಗರವೆಂದರೆ ಏನೆಂದು ಅರಿಯದ ಬಿಜೆಪಿ ಪಕ್ಷಕ್ಕೆ ಮುಜುಗರವಾಗುತ್ತದೆಯೇ ಎಂದು ಕುಟುಕಿದೆ.
ಇನ್ನು ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ಯಡಿಯೂರಪ್ಪ ಭ್ರಷ್ಟ ಎಂಬ ಹೇಳಿಕೆ ಸಂಬಂಧ ಟ್ವೀಟ್ ಮಾಡಿ, “ಯಡಿಯೂರಪ್ಪ ಭ್ರಷ್ಟ” ಎಂದಿರುವ ನಿಮ್ಮದೇ ಜಲಸಂಪನ್ಮೂಲ ಸಚಿವರ ಮಾತು ಕೇಳಿದಿರಾ ಬಿಜೆಪಿ ನಾಯಕರೇ. ನಿಮ್ಮದೇ ಸಚಿವರು ಇಷ್ಟು ಹತಾಶರಾಗಿರುವಾಗ, ಜನತೆ ಇನ್ನೆಷ್ಟು ಹತಾಶರಾಗಿರಬಹುದು ಯೋಚಿಸಿ ಅಂತಾ ಕಾಂಗ್ರೆಸ್ ಕಾಲೆಳೆದಿದೆ.