ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ : ಯಶ್ ಗರಂ
ಹಾಸನ : ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ, ಅವರ ಬಗ್ಗೆ ಮಾತನಾಡಿದಾಗ ಇಮೇಜ್ ನೋಡಿಕೊಂಡು ಕೂರೋಕೆ ಆಗಲ್ಲ ಅಂತಾ ನಟ ಯಶ್ ಹೇಳಿದ್ದಾರೆ.
ಹಾಸನದಲ್ಲಿ ಜಮೀನು ವಿಚಾರವಾಗಿ ಗ್ರಾಮಸ್ಥರು ಮತ್ತು ಯಶ್ ಹೆತ್ತವರ ನಡುವೆ ಗಲಾಟೆ ನಡೆದಿತ್ತು. ವಿಷಯ ತಿಳಿದು ದುದ್ದ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಈ ಹಿನ್ನೆಲೆ ಯಶ್ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು.
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಕೆಲವರು ಜಮೀನಿನ ಒಳಗೆ ಬಂದು ಏನೇನೋ ಮಾಡ್ತಾರೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತಾಡ್ತಾರೆ. ಆ ಹುಡುಗರ ಮೇಲೆ ಕೈ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ಇದೇ ವೇಳೆ ರಸ್ತೆ ವಿಚಾರ ಮಾತನಾಡಿ, ದೇವಸ್ಥಾನಕ್ಕೆ ಹೋಗಲು ರಸ್ತೆ ಮಾಡಿದ್ದಾರೆ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ಏನಾದ್ರು ಒಂದು ಎಕ್ಸಾಂಪಲ್ ಸೆಟ್ ಮಾಡಲು ಜಮೀನು ಮಾಡಿದ್ದೇವೆ. ಬೇಕಾದ್ರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ..? ನಮ್ಮ ತಂದೆ-ತಾಯಿಯೂ ಹಳ್ಳಿ ಜನ ಅವರೂ ಮಾತನಾಡ್ತಾರೆ, ಇವರೂ ಮಾತನಾಡ್ತಾರೆ. ಯಾವ ರೀತಿ ಮಾತನಾಡಬೇಕು ಆ ರೀತಿ ಮಾತನಾಡಬೇಕು ಎಂದು ಬೇಸರ ಹೊರಹಾಕಿದ್ರು. ಇನ್ನು ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ. ತಂದೆ-ತಾಯಿಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ ಎಂದು ಗರಂ ಆದರು.
ನಾನು ಹಾಸನದಲ್ಲೇ ಹುಟ್ಟಿರುವ ಮಗ. ನಮ್ಮ ತಂದೆ-ತಾಯಿ ಹಾಸನದಲ್ಲಿ ಹುಟ್ಟಿದವರು. ಹಾಸನ, ಬೆಳಗಾವಿ, ಮಂಗಳೂರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರು ಮಾಡ್ತೀನಿ. ಬಣ್ಣ ಕಟ್ಟುತ್ತಾರೆ, ದಯವಿಟ್ಟು ನಂಬಬೇಡಿ ಎಂದು ಮನವಿ ಮಾಡಿಕೊಂಡರು.