ನಿಜವಾದ ಭಯೋತ್ಪಾದನೆ ಮಾಡುತ್ತಿರುವುದು ಕೇಂದ್ರ ಸರ್ಕಾರ : ನಟ ಚೇತನ್
ಬೆಂಗಳೂರು : ರೈತರು ಗಾಂಧೀಜಿ ತತ್ವದ ರೀತಿ ಪ್ರತಿಭಟನೆ ಮಾಡ್ತಿದ್ದಾರೆ. ಆದ್ರೆ, ಹಿಂಸೆ ಮಾಡುತ್ತಿರುವುದು ಕೇಂದ್ರ ಸರ್ಕಾರ. ರೈತರಿಗೆ ಜಲಫಿರಂಗಿಗಳನ್ನು, ಮೊಳೆಗಳನ್ನು ಹಾಕೋದು, ಅಶ್ರುವಾಯುಗಳನ್ನು ಸಿಡಿಸುವ ಕೇಂದ್ರ ಸರ್ಕಾರವೇ ನಿಜವಾದ ಭಯೋತ್ಪಾದನೆ ಮಾಡುತ್ತಿದೆ ಎಂದು ನಟ ಚೇತನ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಸೋಮವಾರ ರೈತರ ವಿಧಾನಸೌಧ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಚೇತನ್ ಕೇಂದ್ರ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ರೈತ ವಿರೋಧಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕೇವಲ 2ನೇ ಸ್ವಾತಂತ್ರ್ಯ ಹೋರಾಟ ಅಷ್ಟೇ ಅಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಾನವ ಕುಲದ ಇತಿಹಾಸದಲ್ಲಿಯೇ ದೊಡ್ಡ ಹೋರಾಟವಾಗಿದೆ. ಕೊರೊನಾ ಸಮಯದಲ್ಲಿ ಜನ ಆರೋಗ್ಯದ ಮೇಲಿನ ಭಯದಿಂದ ಮನೆಯಲ್ಲಿದ್ದಾಗ ರೈತವಿರೋಧಿ ಕಾಯ್ದೆಗಳನ್ನು ತಂದಿದ್ದಾರೆ. ಜನರ ಪರ ಕಾಳಜಿಯಿಲ್ಲದ ಸರ್ಕಾರಗಳು ಬೀಳಲೇಬೇಕು ಎಂದು ನಟ ಚೇತನ್ ಗುಡುಗಿದರು.
ಹೋರಾಟಗಾರರನ್ನ ಭಯೋತ್ಪಾದಕರು ಅಂತಾ ಕರೆಯುತ್ತಿದ್ದಾರೆ. ಆದ್ರೆ ಅನ್ಯಾಯದ ವಿರುದ್ಧ ನಿಂತ, ರೈತರ ಪರ ನಿಂತವರು ನಿಜವಾದ ದೇಶಭಕ್ತರು. ರಾಜಕೀಯದ ಹೆಸರಲ್ಲಿ, ಧರ್ಮದ ಹೆಸರಲ್ಲಿ ಹಿಂಸೆ ಮಾಡೋದೇ ಭಯೋತ್ಪಾದನೆ. ರೈತರು ಗಾಂಧೀಜಿ ತತ್ವದ ರೀತಿ ಪ್ರತಿಭಟನೆ ಮಾಡ್ತಿದ್ದಾರೆ. ಆದ್ರೆ ರೈತರಿಗೆ ಜಲಫಿರಂಗಿಗಳನ್ನು, ಮೊಳೆಗಳನ್ನು ಹಾಕೋದು, ಅಶ್ರುವಾಯುಗಳನ್ನು ಸಿಡಿಸುವ ಕೇಂದ್ರ ಸರ್ಕಾರವೇ ನಿಜವಾದ ಭಯೋತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ನಟ ಚೇತನ್ ವಾಗ್ದಾಳಿ ನಡೆಸಿದರು.