ಇಂದೋರ್: ಯುವಕನೊಬ್ಬ ತಾನು ಇಷ್ಟ ಪಟ್ಟಿದ್ದ ಯುವತಿ ಸಿಗಲಿಲ್ಲ ಎಂಬ ಕಾರಣಕ್ಕೆ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ತ್ರಿಕೋನ ಪ್ರೇಮ ಪ್ರಕರಣ ಎಂದು ಇದಕ್ಕೆ ಪೊಲೀಸರು ಹೇಳಿದ್ದಾರೆ. ಘಟನೆಗೂ ಮುನ್ನ ಮೂವರು ದೇವಸ್ಥಾನದಲ್ಲಿ ಭೇಟಿಯಾಗಿದ್ದಾರೆ. ಮೂರು ಜನರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 26 ವರ್ಷದ ಅಭಿಷೇಕ್ ಯಾಧವ್ ಎಂದು ಗುರುತಿಸಲಾಗಿದೆ. ಈತ ಸ್ನೇಹಾ ಜಾಟ್ (22) ಹಾಗೂ ಈಕೆಯ ಪ್ರೇಮಿ ದೀಪಕ್ ಜಾಟ್ ನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಹತ್ಯೆಯಾಗಿರುವ ಸ್ನೇಹಾ ಮತ್ತು ದೀಪಕ್ ಇಬ್ಬರು ಕೂಡ ಪ್ರೀತಿಸುತ್ತಿದ್ದರು. ಅಭಿಷೇಕ್ ಸ್ನೇಹಾನ್ನು ಪ್ರೀತಿ ಮಾಡುತ್ತಿದ್ದ, ಸ್ನೇಹಾ ಅಭಿಷೇಕ್ನ ಪ್ರೀತಿಯನ್ನು ತಿರಸ್ಕರಿಸಿದ್ದಳು ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅಭಿಷೇಕ್ ಗನ್ ತೆಗೆದು, ಸ್ನೇಹಾ ಹಾಗೂ ದೀಪಕ್ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಅವರನ್ನು ಎಳೆದು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.