ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲುಪಾಲಾಗಿದ್ದ ಎಎಪಿ (AAP) ನಾಯಕ ಮನೀಶ್ ಸಿಸೋಡಿಯಾ (Manish Sisodia) ಕೊನೆಗೂ 530 ದಿನಗಳ ನಂತರ ಬಿಡುಗಡೆಯಾಗಿದ್ದಾರೆ.
ಹೊಸ ಮದ್ಯ ನೀತಿ ಹಗರಣದ ಆರೋಪ ಎದುರಿಸುತ್ತಿದ್ದ ಮಾಜಿ ಡಿಸಿಎಂಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಹೀಗಾಗಿ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಹೊರಬಂದ ಸಿಸೋಡಿಯಾರನ್ನು ಎಎಪಿ ಬೆಂಬಲಿಗರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ನಿಮ್ಮ ಪ್ರೀತಿ, ದೇವರ ಆಶೀರ್ವಾದ ಮತ್ತು ಸತ್ಯದ ಶಕ್ತಿಯಿಂದ, ಎಲ್ಲಕ್ಕಿಂತ ಮುಖ್ಯವಾಗಿ ಬಾಬಾಸಾಹೇಬರ ಕನಸಿನಿಂದಾಗಿ ನಾನು ಜೈಲಿನಿಂದ ಹೊರಬಂದಿದ್ದೇನೆ. ಸರ್ವಾಧಿಕಾರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತು ಸರ್ವಾಧಿಕಾರದ ಕಾನೂನುಗಳನ್ನು ರಚಿಸಿ ವಿರೋಧ ಪಕ್ಷದ ನಾಯಕರನ್ನು ಕಂಬಿ ಹಿಂದೆ ಹಾಕಿದರೆ, ಆಗ ದೇಶದ ಸಂವಿಧಾನ ಅವರನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಸಂವಿಧಾನದ ಈ ಶಕ್ತಿಯೊಂದಿಗೆ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರುತ್ತಾರೆ ಎಂದು ಹೇಳಿದ್ದಾರೆ. ಸಿಸೋಡಿಯಾ ಅವರ ಎಂಟನೇ ಮೇಲ್ಮನವಿ ನಂತರ ಅವರಿಗೆ ಜಾಮೀನು ಸಿಕ್ಕಿದೆ.