ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇಂದು ಪ್ರದಾನ ಮಾಡಿದ್ದು, ಡಾಕ್ಟರೇಟ್ ಪದವಿ ಪಡೆದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ವಿ ರವಿಚಂದ್ರನ್ ಅವರು 60 ವರ್ಷ ತುಂಬಿದ್ಮೇಲೆ ಮತ್ತೊಂದು ಹೊಸ ಯುಗ ಆರಂಭವಾಗುತ್ತೆ ಅಂತ ನಾನು ಪ್ರತಿ ಸಲ ಹೇಳ್ತೀನಿ. ಇದೀಗ ಈ ಪದವಿಯಿಂದ ಮತ್ತೊಂದು ಶಕ್ತಿ, ಉತ್ಸಾಹ ಸಿಕ್ಕಿದೆ’ ಎಂದು ಹೇಳಿದರು.
ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಅಲ್ಲದೇ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರೇ ಪದವಿ, ಚಿನ್ನದ ಪದಕ ಪಡೆದಿದ್ದು, ಹೆಣ್ಮಕ್ಕಳ ಸಾಧನೆಯನ್ನು ಕೊಂಡಾಡಿದರು.
ಸಚಿವ ಅಶ್ವತ್ಥ್ ನಾರಾಯಣ ಮಾತನಾಡುತ್ತಾ, ಗುಣಮಟ್ಟದ ಶಿಕ್ಷಣವಿಲ್ಲದೇ ಇದ್ದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. ಬೆಂಗಳೂರು ಸಿಟಿ ಯುನಿವರ್ಸಿಟಿ ಕನಸಿನ ವಿವಿ ಆಗಬೇಕು. ದೊಡ್ಡ ದೊಡ್ಡ ಯೋಚನೆ, ಯೋಜನೆಗಳ ಮೂಲಕ ವಿಶ್ವ ಮಟ್ಟದಲ್ಲೂ ಹೆಸರು ಪಡೀಬೇಕು ಎಂದು ಹೇಳಿದರು.