ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ್’ (Adipurush) ಚಿತ್ರವು ಜೂನ್ 16ರಂದು ತೆರೆಗೆ ಅಪ್ಪಳಿಸಲಿದ್ದು, ಅದಕ್ಕೂ ಮುನ್ನ ಪ್ರೀ -ಲಿರೀಸ್ ಕಾರ್ಯಕ್ರಮ ಇಂದು ನಡೆಯಲಿದೆ.
ಆದಿಪುರುಷ್ ಚಿತ್ರ ಬಿಡುಗಡೆಗೆ ಇನ್ನೂ ಕೇವಲ 10 ದಿನಗಳು ಬಾಕಿ ಇವೆ. ಹೀಗಾಗಿ ಚಿತ್ರವನ್ನು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಅದ್ದೂರಿ ಪ್ರೀ ರಿಲೀಸ್ ಮಾಡಲಾಗುತ್ತಿದೆ.
ನಟ ಪ್ರಭಾಸ್ ಅಭಿನಯದ ಈ ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಮಾಯಣಕ್ಕೆ ಆಧುನಿಕ ಸ್ಪರ್ಶ ನೀಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ರಾಮನ ಪಾತ್ರದಲ್ಲಿ ಪ್ರಭಾಸ್ (Prabhas) ಮತ್ತು ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಪ್ರಭಾಸ್ ಅವರ ಕಟೌಟ್ ಗಳು ತಲೆ ಎತ್ತಿವೆ. ಲಕ್ಷಾಂತರ ಜನ ಅಭಿಮಾನಿಗಳು ಕಾರ್ಯಕ್ರಮ ವೀಕ್ಷಿಸಲು ಆಗಮಿಸುತ್ತಿದ್ದಾರೆ. ‘ಬಾಹುಬಲಿ 2’ ಪ್ರೀ-ರಿಲೀಸ್ ಕಾರ್ಯಕ್ರಮ ಕೂಡ ಇದೇ ಸ್ಥಳದಲ್ಲಿ ನಡೆದಿತ್ತು. ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಕಾರ್ಯಕ್ರಮದಲ್ಲಿ ಗಮನ ಸೆಳೆಯಲಿದ್ದಾರೆ.
ಹಿಂದೂ ಪುರಾಣಗಳ ಪ್ರಕಾರ ರಾಮ ಮತ್ತು ವೆಂಕಟೇಶ್ವರ ಸ್ವಾಮಿ ಎರಡೂ ವಿಷ್ಣುವಿನ ಅವತಾರಗಳು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಅಯೋಧ್ಯೆ ಮತ್ತು ತಿರುಪತಿ ನಡುವೆ ಆಧ್ಯಾತ್ಮಿಕ ಸಂಪರ್ಕ ಸೃಷ್ಟಿಸುವ ರೀತಿಯಲ್ಲಿ ಸೆಟ್ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ 100 ನರ್ತಕರು ಮತ್ತು 100 ಗಾಯಕರು ರಾಮಾಯಣಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಲಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.