“ಅಂದೊಂದಿತ್ತು ಕಾಲ” “ವೀಕೆಂಡ್ ಮೆಮೊರಿಸ್ ವಿತ್ ರವಿಚಂದ್ರನ್”
2018ರಲ್ಲಿ ತೆರೆಕಂಡ ಅನಂತು vs ನುಸ್ರತ್ ಮತ್ತು ಗ್ರಾಮಾಯಣ ಚಿತ್ರಗಳ ನಂತರ ಗ್ಯಾಪ್ ತೆಗೆದುಕೊಂಡಿದ್ದ ವರನಟ ಡಾ.ರಾಜ್ಕುಮಾರ್ ಮೊಮ್ಮಗ ವಿನಯ್ ರಾಘವೇಂದ್ರ ರಾಜ್ಕುಮಾರ್ ಈಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡಲು ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು ವಿನಯ್ ರಾಜಕುಮಾರ್ ಅವರು ‘ಅಂದೊಂದಿತ್ತು ಕಾಲ’ ಸಿನಿಮಾ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ. ವಿನಯ್ ನಾಯಕನಾಗಿ, ನಾಯಕಿಯಾಗಿ ಅದತಿ ಪ್ರಭುದೇವ ನಟಿಸಿದ್ದಾರೆ. ಈ ಇಬ್ಬರ ಕಾಂಬಿನೇಷನ್ ನಲ್ಲಿ ಚಿತ್ರವು ಅದ್ಭುತವಾಗಿ ಮೂಡಿಬರಲಿದೆ.
ಇನ್ನೂ ಚಿತ್ರದಲ್ಲಿ ವಿಶೇಷ ಪಾತ್ರವೊಂದಿದ್ದು, ಸಿನಿಪ್ರಿಯರ ಗಮನ ಆ ಪಾತ್ರದ ಮೇಲೆ ನೆಟ್ಟಿದೆ. ಈ ಪಾತ್ರವು ವಿಶೇಷವಾಗಿದ್ದು, ಈ ಪಾತ್ರವು ಕ್ರೇಜಿಸ್ಟಾರ್ ನ ಕ್ರೇಜಿ ಲುಕ್ ನಲ್ಲಿ ಕಾಣಿಸಿಕೊಳ್ಳಲಿದೆ. ಹೌದು ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ಮಾತನಾಡಿರುವ ರವಿಚಂದ್ರನ್, ‘ಸಿನಿಮಾದಲ್ಲಿ ಪುಟ್ಟ ಪಾತ್ರವಾಗಿದ್ದರೂ, ಇಡೀ ಚಿತ್ರದ ಕಥೆ ಹೇಳೋದೇ ನಾನೇ. ವೀಕೆಂಡ್ ವಿತ್ ರಮೇಶ್ ಮಾದರಿಯಲ್ಲಿ ಮೆಮೊರಿಸ್ ವಿತ್ ರವಿಚಂದ್ರನ್ ಅನ್ನೋ ಕಾರ್ಯಕ್ರಮದ ನಿರೂಪಕ ಪಾತ್ರವನ್ನು ನಾನು ಸಿನಿಮಾದಲ್ಲಿ ನಿರ್ವಹಿಸುತ್ತಿದ್ದೇನೆ.
ನನ್ನ ಕುಟುಂಬದ ಹುಡುಗ ವಿನಯ್. ಅವನ ಚಿತ್ರದಲ್ಲಿ ನಟಿಸೋಕೆ ಕೇಳಿದಾಗ ಇಲ್ಲ ಅನ್ನುವುದಕ್ಕೆ ಆಗಲಿಲ್ಲ. ನಾನು ಆ ಕಾರ್ಯಕ್ರಮದ ಮೂಲಕ ನಾಯಕನ ಕಥೆ ಹೇಳಿಸುತ್ತೇನೆ. ಮೊದಲ ಬಾರಿಗೆ ನಿರೂಪಕನಾಗಿ ನಟಿಸುತ್ತಿದ್ದೇನೆ. ನಾನು ಹಲವು ರಿಯಾಲಿಟಿ ಶೋಗಳ ಜಡ್ಜ್ ಆಗಿದ್ದೇನೆ. ನಿರೂಪಣೆ ಮಾಡಿಲ್ಲ. ಈ ಪಾತ್ರ ಹೊಸದು’ ಎಂದಿದ್ದಾರೆ.
ಈ ವೇಳೆ ಏಕೆ ಪೋಷಕ ಪಾತ್ರದಲ್ಲಿ ಹೆಚ್ಚು ನಟಿಸುತ್ತಿದ್ದೀರಾ ಎಂದು ಕೇಳಿದ್ದಕ್ಕೆ, ಕಡಿಮೆ ಕೆಲಸ ಮತ್ತು ಹೆಚ್ಚು ಸಂಭಾವನೆ’ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ರವಿಚಂದ್ರನ್.
‘ಅಂದೊಂದಿತ್ತು ಕಾಲ’ ಸಿನಿಮಾವನ್ನು ಸುರೇಶ್ ನಿರ್ಮಾಣ ಮಾಡುತ್ತಿದ್ದು, ಕೀರ್ತಿ ಅವರ ನಿರ್ದೇಶನವಿದೆ.