ನಿರ್ಮಲಾ ಸೀತಾರಾಮನ್ ಸೇರಿದಂತೆ ಎಲ್ಲಾ ಮಂತ್ರಿಗಳ ಹರಾಜು ಹಾಕುತ್ತೇನೆ – ವಾಟಾಳ್
ಮೈಸೂರು, ಜೂನ್ 29: ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರು ನಗರದಲ್ಲಿ ಜಟಕಾ ಗಾಡಿ ಏರಿ ಪ್ರತಿಭಟನೆ ನಡೆಸಿದ್ದಾರೆ.
ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು, ಇದರ ಬಗ್ಗೆ ಯಾರು ಕೂಡ ಪ್ರಾಮಾಣಿಕವಾಗಿ ಯೋಚನೆ ಮಾಡುತ್ತಾ ಇಲ್ಲ. ಪಾರ್ಲಿಮೆಂಟ್ ನ ಸದಸ್ಯರು ಮತ್ತು ಕೇಂದ್ರ ಮಂತ್ರಿಗಳನ್ನು ಹರಾಜಿಗೆ ಹಾಕುತ್ತೇನೆ. ನಿರ್ಮಲಾ ಸೀತಾರಾಮನ್ ಸೇರಿದಂತೆ ಎಲ್ಲಾ ಪಾರ್ಲಿಮೆಂಟ್ ಮತ್ತು ಕೇಂದ್ರ ಮಂತ್ರಿಗಳನ್ನು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಹರಾಜು ಹಾಕುತ್ತೇವೆ. ಹರಾಜಿನಲ್ಲಿ ಬರೀ ಕರ್ನಾಟಕ ಮಾತ್ರವಲ್ಲ ದೇಶದ ಯಾರೂ ಬೇಕಾದರೂ ಬಂದು ಭಾಗವಹಿಸಬಹುದು ಎಂದು ಅವರು ವ್ಯಂಗ್ಯ ಮಾಡಿದರು.
ಇನ್ನೊಂದು ತಿಂಗಳಲ್ಲಿ ಕರ್ನಾಟಕದ ಖಜಾನೆ ಖಾಲಿಯಾಗುತ್ತೆ. ಯಡಿಯೂರಪ್ಪ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಖಜಾನೆ ಖಾಲಿಯಾದ ಬಳಿಕ ಯಡಿಯೂರಪ್ಪ ತಮ್ಮ ಪ್ಯಾಂಟು ಶರ್ಟು ಕೂಡ ಮಾರಬೇಕಾದ ಪರಿಸ್ಥಿತಿ ಬರಲಿದೆ. ಇದು ಹಾಸ್ಯ ಎನಿಸಿದರೂ, ಮುಂದಿನ ವಾಸ್ತವ ಪರಿಸ್ಥಿತಿ ಇದೇ ಆಗಿರುತ್ತದೆ ಎಂದು ವಾಟಾಳ್ ವಿಷಾದ ವ್ಯಕ್ತಪಡಿಸಿದರು.