ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಒಂದಾಗಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ, ಒಗ್ಗಟ್ಟಿನ ಮಂತ್ರಕ್ಕಿಂತ ಭಿನ್ನಮತದ ರಾಗವೇ ಜೋರಾಗಿ ಕೇಳಿಬರುತ್ತಿದೆ. 2028ರ ವಿಧಾನಸಭಾ ಚುನಾವಣೆಯ ಗುರಿ ಇಟ್ಟುಕೊಂಡು ಹೆಣೆಯಲಾದ ಮೈತ್ರಿ ತಂತ್ರಗಾರಿಕೆಗೆ, ಈಗ ಕ್ಷೇತ್ರ ಮಟ್ಟದ ನಾಯಕರ ಅಸ್ತಿತ್ವದ ಪ್ರಶ್ನೆಯೇ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ. ದೋಸ್ತಿ ಕೇವಲ ಫೋಟೋಗಳಿಗೆ ಸೀಮಿತವಾಗಿದ್ದು, ತಳಮಟ್ಟದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಸ್ಪೋಟಕ ಸತ್ಯ ಇದೀಗ ಜಗಜ್ಜಾಹೀರಾಗಿದೆ.
ಹಳೆ ಮೈಸೂರಲ್ಲಿ ಅಸ್ತಿತ್ವದ ಹೋರಾಟ
ಬಿಜೆಪಿ ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠರ ನಡುವೆ ದೆಹಲಿ ಮಟ್ಟದಲ್ಲಿ ಏರ್ಪಟ್ಟಿರುವ ಮೈತ್ರಿ ಸೂತ್ರವು ಹಳೆ ಮೈಸೂರು ಭಾಗದ ಬಿಜೆಪಿ ನಾಯಕರ ನಿದ್ದೆ ಗೆಡಿಸಿದೆ. ವಿಶೇಷವಾಗಿ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ದಶಕಗಳಿಂದ ಜೆಡಿಎಸ್ ವಿರುದ್ಧ ಹೋರಾಡುತ್ತಲೇ ಬೆಳೆದಿರುವ ಬಿಜೆಪಿ ನಾಯಕರು, ಈಗ ಅದೇ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ತಮ್ಮ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ ಎಂಬ ಆತಂಕ ಕಮಲ ಪಾಳಯದ ಸ್ಥಳೀಯ ನಾಯಕರಲ್ಲಿ ಮನೆಮಾಡಿದೆ.
ಕ್ಷೇತ್ರ ಹಂಚಿಕೆಯ ಹಗ್ಗಜಗ್ಗಾಟ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರ ಈಗಲೇ ಬೆಂಕಿಯಿಟ್ಟಂತಾಗಿದೆ. ಪ್ರಮುಖವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಬಂಡಾಯದ ಬಾವುಟ ಹಾರಾಡುತ್ತಿದೆ:
ಮಂಡ್ಯದ ಕೆ.ಆರ್.ಪೇಟೆ ಕಗ್ಗಂಟು: ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಮಾಜಿ ಸಚಿವ ನಾರಾಯಣಗೌಡ ಅವರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಒಂದು ವೇಳೆ ಮೈತ್ರಿ ಧರ್ಮ ಪಾಲಿಸಿ ಕ್ಷೇತ್ರ ತ್ಯಾಗ ಮಾಡಿದರೆ, ತಮ್ಮ ರಾಜಕೀಯ ಜೀವನವೇ ಮುಗಿದುಹೋಗಲಿದೆ ಎಂಬ ಭಯ ಅವರನ್ನು ಕಾಡುತ್ತಿದೆ.
ಮದ್ದೂರಿನಲ್ಲಿ ಸುಮಲತಾ ನಡೆ ಏನು?: ಮಂಡ್ಯ ರಾಜಕಾರಣದಲ್ಲಿ ಪ್ರಬಲವಾಗಿರುವ ಸುಮಲತಾ ಅಂಬರೀಶ್, ಮದ್ದೂರು ಕ್ಷೇತ್ರದಿಂದ ತಮ್ಮ ಪುತ್ರ ಅಭಿಷೇಕ್ ಅಂಬರೀಶ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಮದ್ದೂರು ಜೆಡಿಎಸ್ನ ಭದ್ರಕೋಟೆಯಾಗಿದ್ದು, ದಳಪತಿಗಳು ಈ ಕ್ಷೇತ್ರವನ್ನು ಬಿಟ್ಟುಕೊಡುವುದು ಅಸಾಧ್ಯದ ಮಾತು. ಹೀಗಾಗಿ ಸುಮಲತಾ ಅವರು ಮೈತ್ರಿ ವಿರುದ್ಧ ಅಪಸ್ವರ ಎತ್ತಿದ್ದಾರೆ.
ಹಾಸನದಲ್ಲಿ ಹಾವು-ಮುಂಗಸಿ ಕಾಳಗ: ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಜೆಡಿಎಸ್ ಕುಟುಂಬದ ನಡುವಿನ ವೈರತ್ವ ಜಗಜ್ಜಾಹೀರು. ಹಾಲಿ ಶಾಸಕ ಸ್ವರೂಪ್ ಪ್ರಕಾಶ್ ಇರುವುದರಿಂದ ಬಿಜೆಪಿ ಇಲ್ಲಿ ಸ್ಪರ್ಧಿಸುವುದು ಕಷ್ಟ. ಆದರೆ ಪ್ರೀತಂ ಗೌಡ ಬೆಂಬಲಿಗರು ಜೆಡಿಎಸ್ ಬಾವುಟ ಹಿಡಿಯಲು ತಯಾರಿಲ್ಲ. ಸಕಲೇಶಪುರ ಮತ್ತು ಬೇಲೂರಿನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ದೆಹಲಿ ದೋಸ್ತಿ ವರ್ಸಸ್ ಲೋಕಲ್ ಫೈಟ್
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ನೇರವಾಗಿ ದೆಹಲಿ ನಾಯಕರೊಂದಿಗೆ ವ್ಯವಹರಿಸುತ್ತಿರುವುದು ರಾಜ್ಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಮೈತ್ರಿ ಕೇವಲ ಜೆಡಿಎಸ್ ಪಕ್ಷಕ್ಕೆ ಸಂಜೀವಿನಿಯಾಗಿದೆಯೇ ಹೊರತು ಬಿಜೆಪಿಗೆ ಲಾಭದಾಯಕವಲ್ಲ ಎಂಬ ಚರ್ಚೆ ಕಮಲ ಪಾಳಯದಲ್ಲಿ ಜೋರಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ತನ್ನ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಂಡರೆ, ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಲಾಭ ಪಡೆಯಲು ವಿಫಲವಾಯಿತು ಎಂಬ ವಿಶ್ಲೇಷಣೆಗಳು ಈ ಅಸಮಾಧಾನಕ್ಕೆ ತುಪ್ಪ ಸುರಿದಿವೆ.
ವಿಶ್ವಾಸದ ಕೊರತೆ
ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧದ ಅಹೋರಾತ್ರಿ ಧರಣಿಯಲ್ಲಿ ಜೆಡಿಎಸ್ ಗೈರಾಗಿರುವುದು ಮೈತ್ರಿಯಲ್ಲಿನ ಬಿರುಕಿಗೆ ಹಿಡಿದ ಕನ್ನಡಿಯಾಗಿದೆ. ಜೆಡಿಎಸ್ ನಾಯಕರನ್ನು ಪ್ರತಿಭಟನೆಗೆ ಆಹ್ವಾನಿಸಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಡಾ ಹಗರಣದ ಪಾದಯಾತ್ರೆಯಲ್ಲೂ ಉಭಯ ಪಕ್ಷಗಳ ನಡುವಿನ ಅಂತರ ಎದ್ದು ಕಾಣುತ್ತಿತ್ತು.
ಕಾಂಗ್ರೆಸ್ ಸೋಲಿಸುವ ಏಕೈಕ ಉದ್ದೇಶದಿಂದ ಒಂದಾಗಿರುವ ಬಿಜೆಪಿ ಮತ್ತು ಜೆಡಿಎಸ್, ತಮ್ಮ ಆಂತರಿಕ ಕಚ್ಚಾಟವನ್ನು ಬದಿಗಿಟ್ಟು ಮುನ್ನಡೆಯುವಲ್ಲಿ ಎಡವುತ್ತಿವೆ. 2028ರ ವೇಳೆಗೆ ಈ ಬಿರುಕು ಮುಚ್ಚುತ್ತದೆಯೇ ಅಥವಾ ಮೈತ್ರಿ ಮುರಿದು ಬೀಳುತ್ತದೆಯೇ ಎಂಬುದು ಈಗಿನ ಕುತೂಹಲ.








