ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಈಗಾಗಲೇ ಅನೇಕ ನಟನಟಿಯರಿಗೆ ಟೆನ್ಷನ್ ಶುರುವಾಗಿದೆ. ಮತ್ತೊಂದೆಡೆ ಸಂಜನಾ ಹಾಗೂ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರದಲ್ಲಿ ಮುದ್ದಿ ಮುರಿಯುತ್ತಿದ್ದಾರೆ. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಬಗೆದಷ್ಟು ಬಯಲಾಗ್ತಾ ಹೋಗ್ತಿದೆ. ಇದೀಗ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ ಬಂಧಿತ ಆರೋಪಿಯಾಗಿದ್ದಾನೆ. ಈತ ಪ್ರಕರಣದಲ್ಲಿ 17 ನೇ ಆರೋಪಿಯಾಗಿದ್ದು, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರವಿಶಂಕರ್ ಸಿಸಿಬಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಈತನ ಹೆಸರು ಉಲ್ಲೇಖವಾಗಿತ್ತು ಎನ್ನಲಾಗಿದೆ. ಇದೇ ಆಧಾರದಲ್ಲಿ ಸಿಸಿಬಿ ಅಧಿಕಾರಿಗಳು ಶ್ರೀ ಮನೆ ಮೇಲೆ ದಾಳಿ ನಡೆಸಿ ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ದಾಳಿ ವೇಳೆ ಆರೋಪಿ ಮನೆಯಲ್ಲಿ ಮಾದಕ ವಸ್ತುವಿನ 13 ಮಾತ್ರೆಗಳು, 100 ಗ್ರಾಂ ಗಾಂಜಾ, 1.1 ಗ್ರಾಂ ಎಂಡಿಎ ಹಾಗೂ 0.5 ಗ್ರಾಂ ಹ್ಯಾಷ್ ಆಯಿಲ್ ಪತ್ತೆಯಾಗಿರುವುದು ತಿಳಿದುಬಂದಿದೆ.