ಭಾರತೀಯ ಕ್ರೀಡಾ ರಂಗದಲ್ಲಿ ಅನುರಾಗ ಅರಳೋ ಸಮಯ
ಅನುರಾಗ್ ಠಾಕೂರ್….!
ಎಂಥವರನ್ನೂ ಒಂದು ಕ್ಷಣ ಸೂಜಿಗಲ್ಲಿನಂತೆ ಆಕರ್ಷಿಸುವ ಸುರದ್ರುಪಿ ಸುಂದರ . ಮಾತಿನಲ್ಲೇ ಮೋಡಿ ಮಾಡುವ ಮೋಡಿಗಾರ. ಕೆಲಸದಲ್ಲೂ ಅಷ್ಟೇ ಚತುರ. ಎಲ್ಲವನ್ನೂ ಕ್ಷಣ ಮಾತ್ರದಲ್ಲೇ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಕಲೆಗಾರ. ಏಟಿಗೆ ಎದುರೇಟು ನೀಡುವ ಪಕ್ಕಾ ಲೆಕ್ಕಾಚಾರ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಆಡಳಿತಗಾರ. ಹೀಗೆ ಎಲ್ಲವನ್ನು ಅರ್ಥ ಮಾಡಿಕೊಂಡು, ಸದಾ ಸುದ್ದಿಯಲ್ಲಿರುವ ಅನುರಾಗ್ ಠಾಕೂರ್ ಸೋಲಿಲ್ಲದ ಸರದಾರ.
ಪ್ರಧಾನಿ ಮೋದಿ ಸಂಪುಟದಲ್ಲಿ ರಾಜ್ಯ ಹಣಕಾಸು ಸಚಿವರಾಗಿದ್ದ ಅನುರಾಗ್ ಠಾಕೂರ್ ಅವರು ಈಗ ಕೇಂದ್ರ ಕ್ರೀಡಾ ಸಚಿವರಾಗಿದ್ದಾರೆ. ಹೆಚ್ಚುವರಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರೂ ಹೌದು.
ಟೋಕಿಯೋ ಒಲಿಂಪಿಕ್ಸ್ ಗೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಕಿರೇನ್ ರಿಜಿಜು ಅವರ ಸ್ಥಾನಕ್ಕೆ ಅನುರಾಗ್ ಠಾಕೂರ್ ನೇಮಕಗೊಂಡಿದ್ದಾರೆ.
ರಾಜಕಾರಣ ಜೊತೆ ಹಿಮಾಚಲ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಆನಂತರ ಬಿಸಿಸಿಐ ಕಾರ್ಯದರ್ಶಿಯಾಗಿದ್ದರು. ಅಲ್ಲದೆ, ಜಗಮೋಹನ್ ದಾಲ್ಮಿಯಾ ನಿಧನರಾದ ನಂತರ ಅಂದ್ರೆ 2016ರಿಂದ 2017ರವರೆಗೆ ಅನುರಾಗ್ ಠಾಕೂರ್ ಅವರು ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಮಯದಲ್ಲಿ ಬಿಸಿಸಿಐನಲ್ಲಿ ಆಗಿರುವ ಕೆಲವೊಂದು ವಿವಾದಗಳಿಂದ ಸುಪ್ರೀಂ ಕೋರ್ಟ್ ಆದೇಶದಂತೆ ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
26ರ ಹರೆಯದಲ್ಲೇ ಹಿಮಾಚಲ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿ, ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಕ್ರಿಕೆಟ್ ಆಟಗಾರನಾಗಿದ್ದರು. ಕ್ರಿಕೆಟ್ ಜೊತೆಯಲ್ಲಿ ರಾಜಕೀಯ ಅಖಾಡದಲ್ಲೂ ಅನುರಾಗ್ ಠಾಕೂರ್ ಯಶಸ್ಸಿ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
46ರ ಹರೆಯದ ಅನುರಾಗ್ ಠಾಕೂರ್ ಅವ್ರ ವೃತ್ತಿ ಬದುಕು ಟೆಸ್ಟ್, ಏಕದಿನ, ಟಿ-ಟ್ವೆಂಟಿ ಕ್ರಿಕೆಟ್ ಬೆಳೆದು ಬಂದಷ್ಟೇ ಸೊಗಸಾಗಿದೆ. .
ಯಾಕಂದ್ರೆ ಅನುರಾಗ್ ಠಾಕೂರ್ ಗೆ ನಾಯಕತ್ವದ ಗುಣ ಬಂದಿದ್ದು ರಕ್ತಗತವಾಗಿ. ಬುದ್ದಿಬರುವಾಗಲೇ ರಾಜಕೀಯ ಚದುರಂಗದ ಆಟಗಳನ್ನು ಹತ್ತಿರದಿಂದ ನೋಡುತ್ತ ಬೆಳೆಯುವ ಅವಕಾಶ ಸಿಕ್ಕಿತ್ತು. ತಂದೆಯ ಪ್ರಭಾವದಿಂದ ಶಾಲಾ ಕಾಲೇಜ್ ದಿನಗಳಲ್ಲಿ ಮುಂಚೂಣಿಯಲ್ಲಿದ್ರು. ಏಟಿಗೆ ಏಟು ಅನ್ನೋ ತತ್ವಗಳನ್ನು ಮೈಗೂಡಿಸಿಕೊಂಡ್ರು. ಮನೆಯಲ್ಲಿ ರಾಜಕೀಯ ಪ್ರಭಾವಿದ್ರೂ ಅನುರಾಗ್ ಠಾಕೂರ್ ಗೆ ಕ್ರಿಕೆಟ್ ಆಟದ ಮೇಲೆ ಸಾಕಷ್ಟು ಪ್ರೀತಿ. ಸ್ವತಃ ಕ್ರಿಕೆಟಿಗನಾಗಿರುವ ಅನುರಾಗ್ ಠಾಕೂರ್ ಹಿಮಾಚಲ ಕ್ರಿಕೆಟ್ ಸಂಸ್ಥೆಗೆ ಹೊಸ ಕಾಯಕಲ್ಪ ನೀಡಿದ್ದರು.
ಪರಿಣಾಮ, 2000ರಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪಟ್ಟ ತಾನಾಗಿಯೇ ಒಲಿದು ಬಂತು.
ಅಷ್ಟೇ ಅಲ್ಲ, ಅಧ್ಯಕ್ಷನಾಗಿ ಹಿಮಾಚಲ ಕ್ರಿಕೆಟ್ ತಂಡದ ನಾಯಕನಾಗಿ ತಂಡವನ್ನು ಕೂಡ ಮುನ್ನೆಡೆಸಿದ್ದರು. ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾ ಕ್ರೀಡಾಂಗಣ ನಿರ್ಮಿಸಲು ಅನುರಾಗ್ ಠಾಕೂರ್ ಅವರ ಶ್ರಮವೂ ಇದೆ.
34ರ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದ ರಾಜಕಾರಣಿ. ಹಿಮಾಚಲ ಪ್ರದೇಶದ ಹರ್ಮಿಪುರ ಲೋಕ ಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಆಯ್ಕೆಯಾಗಿರುವ ಬಿಜೆಪಿ ಸಂಸದ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಅನುರಾಗ್ ಠಾಕೂರ್ ಅದೃಷ್ಟಕ್ಕೆ ಸಿಕ್ಕಿತ್ತು ಮತ್ತಷ್ಟು ಬಲ. ಅಲ್ಲದೆ 2019ರಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಪದವಿಯನ್ನು ಕೂಡ ಅಲಂಕರಿಸಿದ್ದರು.
ನಂತರ ಬಿಸಿಸಿಐ ಅಖಾಡದಲ್ಲಿ ಟ್ವೆಂಟಿ ಟ್ವೆಂಟಿ ಆಟ ಶುರು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಾಗೂ ಮಾಜಿ ಸಚಿವ ದಿವಗಂತ ಅರುಣ್ ಜೇಟ್ಲಿಯವರ ಗುರುಬಲದಿಂದ ಒಲಿದು ಬಂದಿತ್ತು ಬಿಸಿಸಿಐ ಕಾರ್ಯದರ್ಶಿ ಪಟ್ಟ.
ಆಗ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿ ಜಯ ಸಾಧಿಸಿದ ಚಾಣಕ್ಯ. ಬಳಿಕ ನಡೆದಿದ್ದು ಎಲ್ಲವೂ ಅನುರಾಗದ ಅಲೆ.
ಅಂದ ಹಾಗೇ, ಅನುರಾಗ್ ಠಾಕೂರ್ ಗೆ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಮುಳ್ಳಿನ ಹಾಸಿಗೆಯಂತಿತ್ತು. ಬಿಸಿಸಿಐ ಪದಾಧಿಕಾರಿ ಪಟ್ಟಿಯಲ್ಲಿ ಶ್ರೀನಿವಾಸನ್ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ರು. ಆದ್ರೂ ಚಾಣಕ್ಷ ನಡೆ ಪ್ರದರ್ಶಿಸಿದ ಅನುರಾಗ್ ಠಾಕೂರ್ ನಿಧಾನವಾಗಿ ಹಿಡಿತಕ್ಕೆ ತೆಗೆದುಕೊಂಡಿದ್ದರು. ತಂಡದ ಆಯ್ಕೆ ಸಭೆಯಿಂದ ಹಿಡಿದು ಬಿಸಿಸಿಐ, ಐಪಿಎಲ್ ಹೀಗೆ ಎಲ್ಲಾ ವಿಭಾಗದಲ್ಲೂ ಪ್ರಭಾವ ಬೀರತೊಡಗಿದ್ರು. ಅಷ್ಟೇ ಅಲ್ಲ ದಾಲ್ಮಿಯಾ ನಿಧನ ನಂತರ ಅನುರಾಗ್ ಠಾಕೂರ್ ಸುಲಭವಾಗಿಯೇ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಸುವ ಬಗ್ಗೆ ಅನುರಾಗ್ ಠಾಕೂರ್ ಕಡ್ಡಿ ಮುರಿದಂತೆ ಹೇಳಿಕೆ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಅಭದ್ರತೆಯ ನಡುವೆ ಕ್ರಿಕೆಟ್ ಸಂಬಂಧ ವೃದ್ದಿಸಲು ಸಾಧ್ಯವಿಲ್ಲ. ಕ್ರಿಕೆಟ್ ಗಿಂತಲೂ ದೇಶದ ಭದ್ರತೆ ಮುಖ್ಯ. ಹೀಗೆ ಯಾವುದೇ ಗೊಂದಲಗಳಿಲ್ಲದೆ ನೇರವಾಗಿಯೇ ಪಾಕ್ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದರು. ಮೇಲ್ನೋಟಕ್ಕೆ ಈ ಹೇಳಿಕೆ ರಾಜಕೀಯ ಪ್ರೇರಿತ ಅಂತ ಅನ್ನಿಸಿದ್ರೂ ಅನುರಾಗ್ ಹೇಳಿಕೆ ಅಷ್ಟೇ ಅರ್ಥಪೂರ್ಣವಾಗಿತ್ತು. ಕ್ರಿಕೆಟ್ ಗಿಂತಲೂ ದೇಶದ ಹಿತ ಮುಖ್ಯ. ಆಟಗಾರರ ಬೆವರಿನ ಹನಿಗಿಂತಲೂ ಭಾರತೀಯ ಯೋಧರ ರಕ್ತ ಮುಖ್ಯ ಎಂಬ ನೇರ ನುಡಿ ಅನುರಾಗ್ ಠಾಕೂರ್ ಹೇಳಿಕೆಯಲ್ಲಿತ್ತು.
ಕೇಂದ್ರ ಸರ್ಕಾರ ಹೇಳಬೇಕಾದ ಮಾತನ್ನು ಸ್ವತಃ ಅನುರಾಗ್ ಠಾಕೂರ್ ಅವ್ರೇ ಹೇಳಿ ಮುಗಿಸಿದ್ದರು.
ಇಂತಹ ನೇರ ನಡೆಯ ನುಡಿಯ ಅನುರಾಗ್ ಠಾಕೂರ್ ಗೆ ಈಗ ಭಾರತೀಯ ಕ್ರೀಡಾ ರಂಗಕ್ಕೆ ಹೊಸ ಕಾಯಕಲ್ಪ ನೀಡುವ ಸವಾಲು ಇದೆ. ಈ ಹಿಂದಿನ ಕ್ರೀಡಾ ಸಚಿವರುಗಳು ಏನು ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಮುಂದೆ ಏನು ಮಾಡಬೇಕು ಎಂಬುದು ಮುಖ್ಯ. ಭಾರತೀಯ ಕ್ರಿಕೆಟ್ ಯಶಸ್ಸಿನ ಉತ್ತುಂಗದಲ್ಲಿದೆ. ಬಿಸಿಸಿಐ ಕೂಡ ಶ್ರೀಮಂತವಾಗಿದೆ. ಆದ್ರೆ ಭಾರತದ ಬೇರೆ ಬೇರೆ ಕ್ರೀಡಾ ಸಂಸ್ಥೆಗಳು ದುಡ್ಡಿಲ್ಲದೆ ಪರದಾಡುತ್ತಿದೆ. ಸರ್ಕಾರದ ಸವಲತ್ತುಗಳು ಸೂಕ್ತ ರೀತಿಯಲ್ಲಿ ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ. ಕ್ರೀಡಾಪಟುಗಳಿಗಿಂತ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು, ಕೋಚ್ಗಳಿಗೆ ಹೆಚ್ಚು ವ್ಯಯ ಮಾಡಲಾಗುತ್ತಿದೆ. ಇದೀಗ ಟೋಕಿಯೋ ಒಲಿಂಪಿಕ್ಸ್ ಗೆ ಭಾರತದ ಕ್ರೀಡಾಪಟುಗಳು ಸಿದ್ಧರಾಗಿದ್ದಾರೆ. ಆದ್ರೆ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ ನ ಎಲ್ಲಾ ಕ್ರೀಡೆಗಳಲ್ಲಿ ಕನಿಷ್ಠ ಭಾಗವಹಿಸುವ ಅರ್ಹತೆ ಕೂಡ ಸಿಕ್ಕಿಲ್ಲ. ಕೇವಲ ಬೆರಳೆಣಿಕೆಯಷ್ಟು ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಒಂದು ಚಿನ್ನದ ಪದಕ ಸಿಕ್ರೆ ಅದೇ ದೊಡ್ಡ ಸಾಧನೆ ಎಂಬಂತಾಗಿದೆ.
ಹೀಗಾಗಿ ಅನುರಾಗ್ ಠಾಕೂರ್ ಭಾರತೀಯ ಕ್ರೀಡಾರಂಗವನ್ನು ಉನ್ನತಮಟ್ಟಕ್ಕೆ ಬೆಳೆಸುವತ್ತ ದಿಟ್ಟ ಹೆಜ್ಜೆಯನ್ನಿಡಬೇಕಿದೆ.