ಕೊರೊನಾ ಸಂಕಷ್ಟಕ್ಕೆ ಮಿಡಿದ ‘ವಿರುಷ್ಕಾ’ ದಂಪತಿ – ‘ಸಹಾಯಕ್ಕಾಗಿ ಅಭಿಯಾನ ಶುರು ಮಾಡ್ತೇವೆ’..!
ಮುಂಬೈ : ದೇಶದಲ್ಲಿ ಕೊರೊನಾ ಪರಿಸ್ಥಿತಿಯಿಂದಾಗಿ ಎಲ್ಲಿ ನೋಡಿದ್ರೂ ಸಾವು ನೋವು ಸಂಭವಿಸಿದ್ದು, ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಲಿವುಡ್ ನಟಿ ಅನುಷ್ಕಾ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನೂ ಸಹ ಆಚರಣೆ ಮಾಡಿಕೊಳ್ಳಲಿಲ್ಲ. ಇದೀಗ ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಲು ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಮುಂದಾಗಿದ್ದಾರೆ. ಇದಕ್ಕಾಗಿ ಒಂದು ಅಭಿಯಾನ ಶುರುಮಾಡಲಿದ್ದು, ಶೀಘ್ರವೇ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ದೇಶವೇ ನೋವು ಮತ್ತು ಸಂಕಷ್ಟದ ಸ್ಥಿತಿಯಲ್ಲಿದೆ ಈ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸಾಗಲಿಲ್ಲ. ಆದರೆ ಹಲವರು ನನ್ನ ಹುಟ್ಟುಹಬ್ಬಕ್ಕೆ ವಿಶೇಷ ಸಂದೇಶ ಕಳುಹಿಸಿದ್ದೀರಿ, ಅವರಿಗೆಲ್ಲ ಧನ್ಯವಾದಗಳು ಎಂದಿದ್ದಾರೆ.
ನಾನು ಮತ್ತು ವಿರಾಟ್ ಕೊಹ್ಲಿ ಕೊರೊನಾದ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ನಿರ್ಣಯಿಸಿದ್ದೇವೆ. ನಾವೊಂದು ಅಭಿಯಾನ ಆರಂಭಿಸಲಿದ್ದೇವೆ, ನೀವು ಸಹ ಆ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇರಬೇಕು. ನಾವೆಲ್ಲರೂ ಜಾಗೃತರಾಗಿರಬೇಕು. ದೇಶದ ಜೊತೆಗೆ ನಾವು ನಿಲ್ಲಬೇಕು. ಸಂಕಷ್ಟದಲ್ಲಿರುವವರಿಗೆ ನಾವು ಜೊತೆಯಾಗಬೇಕು. ಎಲ್ಲರೂ ಜಾಗೃತೆಯಾಗಿರಿ, ಸುರಕ್ಷತೆಯಿಂದಿರಿ ಎಂದು ಅನುಷ್ಕಾ ಶರ್ಮಾ ಮನವಿ ಮಾಡಿದ್ದಾರೆ.