ಪದ್ಮ ವಿಭೂಷಣ ಪರಸ್ಕೃತ ಇತಿಹಾಸಕಾರ ಬಾಬಾಸಾಹೇಬ್ ಪುರಂದರೆ ನಿಧನ : ಮೋದಿ ಸಂತಾಪ
ಖ್ಯಾತ ಇತಿಹಾಸಕಾರ , ಪದ್ಮ ವಿಭೂಷಣ ಪುರಸ್ಕೃತ ಲೇಖಕ ಬಾಬಾಸಾಹೇಬ್ ಪುರಂದರೆ (ಬಲ್ವಂತ್ ಮೊರೇಶ್ವರ್ ಪುರಂದರೆ) ಅವರು ಇಂದು ಮುಂಜಾನೆ ನಿಧನರಾದರು. ಇವರು ವಾರದ ಹಿಂದೆ ನ್ಯುಮೋನಿಯಾಗೆ ಒಳಗಾಗಿದ್ದರು. ತಮ್ಮ 99 ನೇ ವಯಸ್ಸಿನಲ್ಲಿ ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ವೆಂಟಿಲೇಟರ್ ಸಹಕಾರದಲ್ಲಿ ಉಸಿರಾಡುತ್ತಿದ್ದರು. ಭಾನುವಾರ ಅವರ ಆರೋಗ್ಯ ತೀವ್ರ ಗಂಭೀರ ಸ್ಥಿತಿಗೆ ತಲುಪಿತ್ತು ಎಂದು ವೈದ್ಯರು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಕುರಿತು ನಿಖರವಾಗಿ ಹೇಳಬಹುದಾದ ವ್ಯಕ್ತಿ ‘ಶಿವ್ ಶಾಹಿರ್’ ಎಂದೇ ಖ್ಯಾತರಾಗಿದ್ದವರು ಪುರಂದರೆ. ಇವರು ಮರಾಠಿಯಲ್ಲಿ ಶಿವಾಜಿ ಮಹಾರಾಜ್ ಕುರಿತು ಪುರಂದರೆ ಅವರು ಎರಡು ಭಾಗಗಳಲ್ಲಿ ರಚಿಸಿರುವ 900 ಪುಟಗಳ ಕೃತಿ ‘ರಾಜಾ ಶಿವಛತ್ರಪತಿ’ ಜನಪ್ರಿಯತೆ ಪಡೆದಿದೆ. ಮೊದಲ ಬಾರಿಗೆ 1950ರಲ್ಲಿ ಪ್ರಕಟಗೊಂಡ ಕೃತಿಯು ಈವರೆಗೂ ಹಲವು ಬಾರಿ ಮರುಮುದ್ರಣ ಕಂಡಿದೆ. 1980ರ ದಶಕದಲ್ಲಿ ಶಿವಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿ ‘ಜಾಣತಾ ರಾಜ’ ನಾಟಕವನ್ನು ರಚಿಸಿ, ನಿರ್ದೇಶಿಸಿದರು.
ಪ್ರಧಾನಿ ಮೋದಿಯವರು ಟ್ವೀಟ್ ಮಾಡುವ ಮೂಲಕ ಬಾಬಾಸಾಹೇಬ್ ಪುರಂದರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಆಗಿರುವ ನೋವು ಪದಗಳಲ್ಲಿ ಹೇಳಲಾಗದು. ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ ಅವರ ಅಗಲಿಕೆಯು ಇತಿಹಾಸ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.