ಕಾಂಗ್ರೆಸ್ ಜೊತೆ ಮೈತ್ರಿಯಿಂದ ಜೆಡಿಎಸ್ ಗೆ ಹಿನ್ನಡೆ : ಕುಮಾರಸ್ವಾಮಿ
ರಾಮನಗರ : ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಜೆಡಿಎಸ್ ಗೆ ಹಿನ್ನಡೆಯಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಪರಿಣಾಮ ಜೆಡಿಎಸ್ ಗೆ ಹಿನ್ನಡೆಯಾಯ್ತು.
ರಾಮನಗರದಲ್ಲಿ ನಾನು ನಮ್ಮ ತಂದೆ ಬಂದಾಗ ಕಾಂಗ್ರೆಸ್ಸಿನವರು ಮನೆ ಸೇರಿದ್ದರು. ಆದ್ರೆ ಈಗ ರಾಮನಗರದ ನನ್ನ ಭದ್ರಕೋಟೆಯ ಫೌಂಡೇಶನ್ ನನ್ನೇ ಅಲುಗಾಡಿಸಲು ಪ್ರಾರಂಭ ಮಾಡಿದ್ದಾರೆ ಎಂದು ಆರೋಪಿಸಿದ್ರು.
ಚಿತ್ರದುರ್ಗಾದ ಕೋಟೆಗೆ ಹೈದರಾಲಿ ಸೈನಿಕರು ಕಿಂಡಿಯಲ್ಲಿ ನುಗ್ಗಿದ್ದರು. ಅದೇ ರೀತಿ ರಾಮನಗರದಲ್ಲಿ ಕಾಂಗ್ರೆಸ್ ನವರು ನನ್ನ ಕೋಟೆಗೆ ನುಗ್ಗಿದ್ದಾರೆ.
ಆದರೆ ನಾನು ಹೋರಾಟ ಮಾಡ್ತೇನೆ, ರಾಮನಗರದಲ್ಲಿ ನನಗೆ ಭಯವಿಲ್ಲ. ರಾಮನಗರದಲ್ಲಿ ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನ ಅಲುಗಾಡಿಸಲು ಸಾಧ್ಯವಿಲ್ಲ.
ಇನ್ನು ಎಷ್ಟೇ ಜನರು ಹೋದರು ಜೆಡಿಎಸ್ ಬಲವಾಗಿರುತ್ತದೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇನ್ನು ಸಿಡಿ ವಿಚಾರವಾಗಿ ಮಾತನಾಡಿ, ರಮೇಶ್ ಜಾರಕಿಹೊಳಿ ಹೇಳಿರುವ ಆ ಮಹಾನಾಯಕ ಯಾರೆಂದು ನೋಡಲು ನಾನು ಕಾತುರನಾಗಿದ್ದೇನೆ.
ಈ ಪ್ರಕರಣ ಸಾರ್ವಜನಿಕವಾಗಿ ನಗೆಪಾಟಲುಗೆ ದಾರಿಯಾಗಿದೆ. ಅಂತಿಮವಾಗಿ ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ನೋಡಲು ನಾನು ಕಾಯ್ತಿದ್ದೇನೆ ಎಂದು ಹೇಳಿದ್ರು.