ಹೈದರಾಬಾದ್: ತೆಲಂಗಾಣದ ಜುಬಿಲಿ ಹಿಲ್ಸ್ ಉಪಚುನಾವಣೆ ಕಣ ರಂಗೇರುತ್ತಿದ್ದಂತೆ, ರಾಜಕೀಯ ವಾಗ್ದಾಳಿಗಳು ತಾರಕಕ್ಕೇರಿವೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೇವಲ ಮುಸ್ಲಿಂ ಮತಗಳನ್ನು ಪಡೆಯಲು ‘ಮುಸ್ಲಿಂ ಟೋಪಿ’ ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮತಕ್ಕಾಗಿ ನಾನು ಟೋಪಿ ಧರಿಸಬೇಕಾದ ಪರಿಸ್ಥಿತಿ ಬಂದರೆ, ಅಂತಹ ರಾಜಕಾರಣ ಮಾಡುವ ಬದಲು ನನ್ನ ತಲೆಯನ್ನೇ ಕತ್ತರಿಸಿಕೊಳ್ಳಲು ಸಿದ್ಧ” ಎಂದು ಅವರು ಗುಡುಗಿದ್ದಾರೆ.
ನವೆಂಬರ್ 11 ರಂದು ನಡೆಯಲಿರುವ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕಾವು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಾಂಪ್ರದಾಯಿಕ ಟೋಪಿ ಧರಿಸಿದ್ದರು ಎನ್ನಲಾಗಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಬಂಡಿ ಸಂಜಯ್, ಇದು ಕಾಂಗ್ರೆಸ್ನ ಓಲೈಕೆ ರಾಜಕಾರಣದ ಪರಮಾವಧಿ ಎಂದು ಟೀಕಿಸಿದ್ದಾರೆ.
“ನಾನೊಬ್ಬ ನಿಜವಾದ ಹಿಂದೂ. ಬೇರೆ ಧರ್ಮದವರನ್ನು ಮೆಚ್ಚಿಸಲು ಅವರಂತೆ ಪ್ರಾರ್ಥನೆ ಮಾಡುವ ನಾಟಕವಾಡಿ ನಾನು ಆ ಧರ್ಮಗಳಿಗೆ ಅವಮಾನ ಮಾಡುವುದಿಲ್ಲ. ಆದರೆ ರೇವಂತ್ ರೆಡ್ಡಿ ಕೇವಲ ವೋಟುಗಳಿಗಾಗಿ ಈ ರೀತಿ ಮಾಡಿದ್ದಾರೆ. ಇದು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಅವರು ಯಾರನ್ನು ಮೆಚ್ಚಿಸಲು ಹೋದರೋ ಆ ಮುಸ್ಲಿಂ ಸಮುದಾಯಕ್ಕೂ ಮಾಡಿದ ಅವಮಾನ” ಎಂದು ಸಂಜಯ್ ಆರೋಪಿಸಿದರು.
ರೇವಂತ್ ರೆಡ್ಡಿಗೆ ನೇರ ಸವಾಲು
ಇಷ್ಟಕ್ಕೇ ಸುಮ್ಮನಾಗದ ಸಂಜಯ್, ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ನೇರ ಸವಾಲು ಹಾಕಿದರು. “ಆಶ್ಚರ್ಯಕರ ಸಂಗತಿಯೆಂದರೆ, ಆ ಕಾರ್ಯಕ್ರಮದಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಎಐಎಂಐಎಂ ನಾಯಕರು ಕೂಡ ಟೋಪಿ ಧರಿಸಿರಲಿಲ್ಲ. ಆದರೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾತ್ರ ವೋಟಿಗಾಗಿ ಧರಿಸಿದ್ದರು. ನಿಮಗೆ ಧೈರ್ಯವಿದ್ದರೆ, ಹಿಂದೂಗಳ ಮತಗಳನ್ನು ಪಡೆಯಲು ಅಜರುದ್ದೀನ್ಗೆ ‘ವಕ್ರತುಂಡ ಮಹಾಕಾಯ’ ಎಂದು ಜಪಿಸಲು ಹೇಳಿ ನೋಡೋಣ? ಅಥವಾ ಅಸಾದುದ್ದೀನ್ ಓವೈಸಿಯನ್ನು ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಕರೆದೊಯ್ದು ‘ಅಮ್ಮಾವರು’ ಹಾಡು ಹಾಡಿಸಿ ನೋಡೋಣ?” ಎಂದು ಪ್ರಶ್ನಿಸಿದ್ದಾರೆ.
ಬಂಡಿ ಸಂಜಯ್ ಅವರ ಈ ಖಡಕ್ ಹೇಳಿಕೆಯು ತೆಲಂಗಾಣ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಉಪಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಈ ಹೇಳಿಕೆಯು ಧಾರ್ಮಿಕ ಆಧಾರದ ಮೇಲೆ ಮತೀಯ ಧ್ರುವೀಕರಣಕ್ಕೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 14 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ವಾದ-ವಿವಾದಗಳು ಮತದಾರರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಕಾದುನೋಡಬೇಕಿದೆ. ಈ ಆರೋಪಗಳಿಗೆ ಕಾಂಗ್ರೆಸ್ ಪಕ್ಷದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.







