Bangalore | ಹಿಂದೂಯೇತರರ ಅಂಗಡಿ ಧ್ವಂಸ | ಕಾಂಗ್ರೆಸ್ – ಬಿಜೆಪಿ ಟ್ವೀಟ್ ವಾರ್
ಬೆಂಗಳೂರು : ಧಾರವಾಡ ನುಗ್ಗೀಕೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮುಸ್ಲಿಂರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶ್ರೀ ರಾಮಸೇನೆ ಕಾರ್ಯಕರ್ತರು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ಟ್ವಿಟ್ ವಾರ್ ನಡೆಸುತ್ತಿದೆ.
ಈ ಘಟನೆಯ ವಿಡಿಯೋವನ್ನು ಟ್ವಿಟ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧದ ಕಿಡಿಕಾರಿದೆ.
ಮುಖ್ಯಮಂತ್ರಿಗಳೇ…. ಸೌಖ್ಯವೇ? ಆರೋಗ್ಯವಾಗಿದ್ದೀರಿ ಅಲ್ಲವೇ? ಕಣ್ಣು, ಕಿವಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ ತಾನೇ? ಮೆದುಳು ಸುಸ್ಥಿತಿಯಲ್ಲಿದೆ ತಾನೇ? ಹೃದಯವಿದೆಯಲ್ಲವೇ?ಎಲ್ಲವೂ ಸರಿ ಇದ್ದು ಸುಮ್ಮನಿದ್ದೀರಿ ಎಂದರೆ ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ ಎಂದು ಖಾರವಾಗಿ ಟ್ವೀಟ್ ಮಾಡಿದೆ.
ಇದಕ್ಕೆ ಟಾಂಗ್ ಕೊಟ್ಟಿರುವ ಬಿಜೆಪಿ ಘಟಕ, ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ, ಸಮಾಜ ಘಾತುಕರ ಮೇಲಿನ ಪ್ರಕರಣ ಹಿಂಪಡೆಯುವಾಗ, ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗೆ ಆರೋಗ್ಯ ಸರಿ ಇರಲಿಲ್ಲವೇ? ಕಣ್ಣು, ಕಿವಿಗಳು ಕೆಲಸ ಮಾಡುತ್ತಿರಲಿಲ್ಲವೇ? ಮೆದುಳು ಸುಸ್ಥಿತಿಯಲ್ಲಿರಲಿಲ್ಲವೇ? ಹೃದಯವಿರಲಿಲ್ಲವೇ? ನಿಮ್ಮ ಜಾಣ ಕಿವುಡು, ಜಾಣ ಮರೆವನ್ನು ಶ್ರೀರಾಮ ಕ್ಷಮಿಸುವನೇ ಎಂದು ಬರೆದುಕೊಂಡಿದೆ. bangalore-Congress – BJP Tweet War