Bangalore | ಪಠ್ಯ ಪುಸ್ತಕ ಪರಿಷ್ಕರಣೆ : ಸಚಿವರ ಜಂಟಿ ಸುದ್ದಿಗೋಷ್ಠಿ
ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ್ರು ಸಿಎಂಗೆ ಪತ್ರ ಬರೆದ ಬೆನ್ನಲ್ಲೇ ವಿಧಾನಸೌಧದಲ್ಲಿ ಸಚಿವರು ಜಂಟಿ ಸುದ್ದಿಗೋಷ್ಟಿ ನಡೆಸಿದ್ದಾರೆ.
ಹಿರಿಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆದಿದ್ದು, ಸಿ ಸಿ ಪಾಟೀಲ್,ಬೈರತಿ ಬಸವರಾಜ್,ಶಿವರಾಂ ಹೆಬ್ಬಾರ್, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತಿದ್ದರು.
ಆದ್ರೆ ಜಂಟಿ ಸುದ್ದಿಗೋಷ್ಟಿಯಿಂದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ದೂರ ಉಳಿದಿದ್ದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಪಠ್ಯ ಪುಸ್ತಕ ಪರಿಷ್ಕರಣೆ ಇಷ್ಟೊಂದು ಚರ್ಚೆ,ವಾದ–ವಿವಾದ,ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ.
ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತೆ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಈ ಹಿಂದೆ ಪಠ್ಯಪರಿಷ್ಕರಣೆ ಆಗಿತ್ತು. ಆಗ ಅಲ್ಪಸಂಖ್ಯಾತರ ಓಲೈಕೆಗಾಗಿ ಪರಿಷ್ಕರಣೆ ಮಾಡಿದ್ದರು.
ಹಿಂದೂ ಅನ್ನೋ ಪದಗಳನ್ನ ತೆಗದು ಹಾಕಿದ್ದರು. ರಾಮ,ಶಿವನ ಹೆಸರು ತೆಗದುಹಾಕಿದ್ದರು ಎಂದು ದೂರಿದರು.
ಇನ್ನು ಕುವೆಂಪು ಪಠ್ಯವನ್ನ ೮ ಇದ್ದಿದ್ದು ೭ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ, ನಮ್ಮ ಸರ್ಕಾರ ೧೦ ಅಧ್ಯಾಯಗಳನ್ನ ಸೇರಿಸಿದ್ದೇವೆ. ನಾವೆಲ್ಲಿ ತಪ್ಪು ಮಾಡಿದ್ದೇವೆ ಹೇಳಿ ಎಂದು ಅಶೋಕ್ ಪ್ರಶ್ನಿಸಿದರು.
ಮೈಸೂರು ರಾಜ ಒಡೆಯರ್ಬರನ್ನ ಸಿದ್ದರಾಮಯ್ಯ ಕಡೆಗಣನೆ ಮಾಡಲಾಗಿತ್ತು. ಟಿಪ್ಪು ಕಂಡ್ರೆ ಸಿದ್ದರಾಮಯ್ಯ ರವರಿಗೆ ಅದೇನೋ ಪ್ರೀತಿನೋ, ಟಿಪ್ಪು ಅಂದ್ರೆ ಸಾಕು ಸಿದ್ದರಾಮಯ್ಯಗೆ ಮೈಮೇಲೆ ಬಂದಾಂಗೆ ಆಡ್ತಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ೬ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕ್ರೈಸ್ತ,ಮುಸ್ಲಿಂ ಆರಾಧನಾ ಸ್ಥಳಗಳನ್ನ ಉಳಿಸಿಕೊಂಡು, ದೇವಾಲಯದ ಚಿತ್ರಗಳನ್ನ ಕೈ ಬಿಟ್ಟಿದ್ದರು.
ಹಿಂದೂಗಳ ಕಡೆಗಣನೆ ಮಾಡಿ ಮುಸಲ್ಮಾನರ ಓಲೈಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಶಿವಾಜಿಯನ್ನ ಕಡೆಗಣಿಸಲಾಗಿತ್ತು. ರಜಪೂತರ ಗುಣ ಧರ್ಮಗಳನ್ನ ಕಡೆಗಣಿಸಿದ್ರು.
ಮೊಘಲರ ಇತಿಹಾಸಕ್ಕೆ ಹೆಚ್ಚು ಗಮನ ಕೊಟ್ಟು ರಜಪೂತರ ಬಗ್ಗೆ ಇದ್ದ ವಿವರಗಳನ್ನ ಬರಗೂರು ಸಮಿತಿ ಕಡಿತಗೊಳಿಸಿತ್ತು ಎಂದು ಆರೋಪಿಸಿದ್ರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ವಿರುದ್ಧ ಕಿಡಿಕಾರಿದ ಅಶೋಕ್, ಡಿ ಕೆ ಶಿವಕುಮಾರ್ ಕೆಂಪೇಗೌಡ ಇತಿಹಾಸ ಇರುವ ಪುಸ್ತಕ ಹರಿದು ಹಾಕಿದ್ದರು. ನಾವು ಕೆಂಪೇಗೌಡ ಇತಿಹಾಸ ಹಾಕಿದ್ದೇವೆಅದನ್ನ ಹರಿದು ಹಾಕಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.