ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ : ಕಾಂಗ್ರೆಸ್
ಬೆಂಗಳೂರು : ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕ ದಿನಗಳಲ್ಲಿ ಸ್ವೀಕರಿಸುವ ಬಿಬಿಎಂಪಿ ನಿಯಮಕ್ಕೆ ಸಾರ್ವಜನಿಕರು ಫುಲ್ ಗರಂ ಆಗಿದ್ದಾರೆ.
ಈ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಮೊದಲ ಬಾರಿ ಆಡಳಿತಕ್ಕೆ ಬಂದಾಗ ಸರ್ಕಾರದ ಬೇಜವಾಬ್ದಾರಿತನದಿಂದ ಬೆಂಗಳೂರಿನ ಕಸದ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು.
ಕಾಂಗ್ರೆಸ್ ಆಡಳಿತದಲ್ಲಿ ಈ ಸಮಸ್ಯೆಯನ್ನು ನಿಯಂತ್ರಿಸಲಾಗಿತ್ತು, ಆದರೆ ಈಗ ಮತ್ತೊಮ್ಮೆ ಬಿಜೆಪಿ ಕಸ ನಿರ್ವಹಣೆಯಲ್ಲಿ ಸೋತಿದೆ. ಮೋದಿಯವರ ‘ಗಾರ್ಬೆಜ್ ಸಿಟಿ’ ಮಾತನ್ನು ಬಿಜೆಪಿ ನಿಜ ಮಾಡುತ್ತಿದೆ.
ಬಿಬಿಎಂಪಿಯಲ್ಲಿ ಬಿಜೆಪಿ ಬಂದು ಕುಳಿತಮೇಲೆ ಭ್ರಷ್ಟಾಚಾರ ಒಂದನ್ನ ಬಿಟ್ಟು ಇನ್ಯಾವ ಕೆಲಸಗಳೂ ನಡೆಯುತ್ತಿಲ್ಲ.
ಇತ್ತೀಚಿಗೆ ಹಲವು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳು ಬಿದ್ದಿವೆ, ಆದರೂ ಬಿಬಿಎಂಪಿ ಎಚ್ಚೆತ್ತಿಲ್ಲ.
ದುರಂತ ಸಂಭವಿಸುವುದಕ್ಕೂ ಮುನ್ನ ಹಳೆಯ, ಅಪಾಯಕಾರಿ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸುವ ಗಂಭೀರ ಕ್ರಮ ಕೈಗೊಳ್ಳಬೇಕು.
ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ, ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿದೆ. ಮಕ್ಕಳಿಗೆ ಸ್ವೆಟರ್ ಇಲ್ಲ.
ಹಳೆ ಕಟ್ಟಡಗಳ ತೆರವಿಲ್ಲ. ಕಸದ ಸಮಸ್ಯೆ ಉಲ್ಬಣ. ರಸ್ತೆಗಳಲ್ಲಿ ಮಾರಣಾಂತಿಕ ಗುಂಡಿಗಳು.
ಟ್ರಾಫಿಕ್ ಸಮಸ್ಯೆಗೆ, ಅಪಘಾತಗಳಿಗೆ ಕಾರಣವಾಗುತ್ತಿರುವ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.