ಬಿಸಿಸಿಐ ಬಿಗ್ ಬಾಸ್ ಗಳ ರಾಜಕೀಯಕ್ಕೆ ವಿರಾಟ್ ಬಲಿ…?
ಬಿಸಿಸಿಐ ಬಿಗ್ ಬಾಸ್ ಗಳ ರಾಜಕೀಯಕ್ಕೆ ಬಲಿಯಾದ್ರಾ ವಿರಾಟ್ ಕೊಹ್ಲಿ..?
ಸೌರವ್ ಗಂಗೂಲಿ, ಜೈ ಶಾ ರಾಜಕೀಯಕ್ಕೆ ರೋಸಿ ಹೋಗಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರಾ ವಿರಾಟ್..?
ಸದ್ಯ ಕ್ರೀಡಾ ವಲಯದ ಜೊತೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಪ್ರಶ್ನೆಗಳಿವು.
ಹೌದು..! ಕಳೆದ ಕೆಲ ತಿಂಗಳಿನಿಂದ ಭಾರತೀಯ ಕ್ರಿಕೆಟ್ ನಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆಯುತ್ತಿವೆ.
ಮುಖ್ಯವಾಗಿ ಟೀಂ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಕಳೆದ ಟಿ 20 ವಿಶ್ವಕಪ್ ವೇಳೆಯಲ್ಲಿ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದು, ಏಕದಿನ, ಟೆಸ್ಟ್ ನಾಯಕತ್ವದತ್ತ ಹೆಚ್ಚು ಗಮನ ಹರಿಸುತ್ತೇನೆ ಅಂತಾ ಘೋಷಣೆ ಮಾಡಿದ್ರು.
ವಿರಾಟ್ ರ ಈ ನಿರ್ಧಾರಕ್ಕಾಗಿಯೇ ಬಕ ಪಕ್ಷಿಗಳಂತೆ ಕಾಯುತ್ತಿರುವಂತೆ ಬಿಸಿಸಿಐ ಬಿಗ್ ಬಾಸ್ ಗಳು ಏಕದಿನ ನಾಯಕತ್ವವನ್ನು ವಿರಾಟ್ ಅವರಿಂದ ಕಿತ್ತುಕೊಂಡರು.
ಬಿಸಿಸಿಐನ ಈ ನಿರ್ಧಾರ ಕ್ರಿಕೆಟ್ ಲೋಕದಲ್ಲಿ ಭಾರ ಸಂಚಲನವನ್ನು ಸೃಷ್ಠಿ ಮಾಡಿತ್ತು. ಏಕದಿನ ಕ್ರಿಕೆಟ್ ನಲ್ಲಿ ನಾಯಕರಾಗಿ ವಿರಾಟ್ ಕೊಹ್ಲಿ, ಈವರೆಗೂ ಭಾರತದ ಯಾವೊಬ್ಬ ಕ್ಯಾಪ್ಟನ್ ಮಾಡದಂತಹ ಸಾಧನೆ ಮಾಡಿದ್ದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ 95 ಮ್ಯಾಚ್ ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ, 65 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ.
ಇದಲ್ಲದೇ ದೇಶ-ವಿದೇಶದಲ್ಲಿಯೂ ಟೀಂ ಇಂಡಿಯಾ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಹೀಗಿದ್ದರೂ ವಿರಾಟ್ ಕೊಹ್ಲಿ ಅವರನ್ನ ಕ್ಯಾಪ್ಟನ್ಸಿ ಸ್ಥಾನದಿಂದ ಕೆಳಗಿಳಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇದು ಬಿಸಿ ಬಿಸಿ ಚರ್ಚೆಯಲ್ಲಿರುವಂತೆ ವಿರಾಟ್ ಕೊಹ್ಲಿ ಏಕಾಏಕಿ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಆದ್ರೆ ಇದು ಪೂರ್ವನಿಯೋಜಿತ ಪ್ಲಾನ್ ಆಗಿದೆ ಎಂದು ಕೆಲವರ ವಾದವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಗೆ ಅಲಭ್ಯವಾಗಿದ್ದು, ಅದಕ್ಕೆ ನೀಡಿದ್ದ ಕಾರಣ ಯಾರೂ ಒಪ್ಪಿಕೊಳ್ಳುವಂತೆ ಇರಲಿಲ್ಲ.
ಯಾಕಂದರೆ ಕೊನೆಯ ಕ್ಷಣದಲ್ಲಿ ವಿರಾಟ್ ಪಂದ್ಯದಿಂದ ದೂರ ಉಳಿದರು. ಮೂರನೇ ಪಂದ್ಯ ಸೋಲುತ್ತಿದ್ದಂತೆ ವಿರಾಟ್, ಕ್ಯಾಪ್ಟನ್ಸಿಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು.
ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೇ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಲು ಸರಣಿ ಸೋಲೇ ಕಾರಣ ಎನ್ನುವುದಾದರೇ 2018ರಲ್ಲಿ ತ್ಯಜಿಸಬೇಕಿತ್ತು.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತಾಗಲೇ ವಿರಾಟ್, ನಾಯಕತ್ವಕ್ಕೆ ತಿಲಾಂಜನಿ ಇಡಬೇಕಿತ್ತು.
ಇಲ್ಲಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋತಾಗಲಾದ್ರೂ ವಿರಾಟ್ ಗುಡ್ ಬೈ ಹೇಳಬಹುದಿತ್ತು.
ಇದೆಲ್ಲಾ ಬಿಟ್ಟು ಈಗಲೇ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದು ಮಾತ್ರ ಚರ್ಚಿನೀಯವಾಗಿದೆ.
ವಿರಾಟ್ ವಿದಾಯ ಘೋಷಿಸಲು ಬಿಸಿಸಿಐನಲ್ಲಿರುವ ರಾಜಕೀಯವೇ ಕಾರಣ ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.