ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದ ಪರಿಣಾಮ ನೈರುತ್ಯ ಮುಂಗಾರು ಮಾರುತಗಳು ಈ ಬಾರಿ ತಡವಾಗಿವೆ. ಈ ವಾಯುಭಾರ ಕುಸಿತವು ಚಂಡಮಾರುತದ ಸ್ವರೂಪಕ್ಕೆ ತಿರುಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದೇ ರೀತಿಯ ವಾಯುಭಾರ ಕುಸಿತ ಮುಂದುವರೆದರೆ ಅದು ಚಂಡಮಾರುತದ ರೂಪ ಪಡೆಯಲಿದ್ದು, ಈಗಾಗಲೇ ಈ ಚಂಡಮಾರುತಕ್ಕೆ ಬಿಪರ್ಜಾಯ್ ಎಂದು ಹೆಸರಿಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತವು ಉತ್ತರ ದಿಕ್ಕಿಗೆ ಚಲಿಸುವ ಸೂಚನೆ ನೀಡಿದೆ. ಈ ಮೂಲಕ ಭಾರತದ ಪಶ್ಚಿಮ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳೂ ಇವೆ. ಗೋವಾ ಹಾಗೂ ಮುಂಬೈ ತೀರಕ್ಕೆ ಅಪ್ಪಳಿಸಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಈ ಚಂಡಮಾರುತ ಈಶಾನ್ಯ ದಿಕ್ಕಿಗೆ ತಿರುಗಿದರೆ ಒಮೆನ್ ಹಾಗೂ ಯೆಮನ್ ರಾಷ್ಟ್ರಗಳ ಕರಾವಳಿ ತಲುಪಲಿದೆ ಎನ್ನಲಾಗಿದೆ.
ಬಿಪರ್ಜಾಯ್ ಎಂದರೆ ಅಪಾಯ, ವಿನಾಶ ಹಾಗೂ ದುರಂತ ಎಂಬ ಅರ್ಥ ಸೂಚಿಸುತ್ತದೆ. ಅಂತಾರಾಷ್ಟ್ರೀಯ ಹವಾಮಾನ ಸಂಘಟನೆಯು ಉಷ್ಣ ವಲಯದಲ್ಲಿ ಏಳುವ ಚಂಡಮಾರುತಗಳಿಗೆ ಹೆಸರಿಡಲು ಅನುಸರಿಸುವ ಪದ್ದತಿ ಪ್ರಕಾರ ಈ ಹೆಸರನ್ನು ಇಡಲಾಗಿದೆ. ಉಷ್ಣ ವಲಯದ ಚಂಡಮಾರುತ ತಟ್ಟುವ ಆಯಾ ಪ್ರದೇಶಗಳ ದೇಶಗಳು ಸೂಚಿಸುವ ಹೆಸರನ್ನೇ ಚಂಡಮಾರುತಗಳಿಗೆ ಇಡುವ ಪದ್ದತಿ ನಡೆದುಕೊಂಡು ಬಂದಿದೆ.