‘ಇಂಧನ ಬೆಲೆ ಏರಿಕೆಯಲ್ಲಿ ಬಿಜೆಪಿ ತೊಲಗಲಿ’ : ಡಿ.ಕೆ.ಶಿವಕುಮಾರ್
ಚಿತ್ರದುರ್ಗ : ಬೆಲೆ ಹೆಚ್ಚಳಕ್ಕೆ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದಾದ್ಯಂತ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಅದರಂತೆ ಇಂದು ಹಿರಿಯೂರಿನಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಲೆ ಹೆಚ್ಚಳಕ್ಕೆ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಿತಿಮೀರಿ ಏರಿಸಲಾಗಿದೆ.
35 ಪೆಟ್ರೋಲ್ ಗೆ 65 ತೆರಿಗೆ ವಿಧಿಸಲಾಗುತ್ತಿದೆ. ಕಳೆದ ವರ್ಷ 70 ಇದ್ದ ಪೆಟ್ರೋಲ್ ದರ ಏಕಾಏಕಿ 100ಕ್ಕೆ ಏರಿಸಿದ್ದು ಯಾವ ಸೀಮೆಯ ನ್ಯಾಯ ಎಂದು ಪ್ರಶ್ನಿಸಿ, ಇದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಕಿಡಿಕಾರಿದರು.
ಇದೇ ವೇಳೆ ‘ಇಂಧನ ಬೆಲೆ ಏರಿಕೆಯಲ್ಲಿ ಬಿಜೆಪಿ ತೊಲಗಲಿ’ ಎಂದು ಘೋಷಣೆ ಕೂಗಿದ ಟ್ರಬಲ್ ಶೂಟರ್, ಇಂಧನ ಬೆಲೆ ಹೆಚ್ಚಳದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಗಗನಮುಖಿ ಆಗಿದೆ.
ಜನಸಾಮಾನ್ಯರ ಬದುಕು ಇನ್ನಷ್ಟು ದುರ್ಬರವಾಗಿದೆ. ನರೇಗಾ ಕೂಲಿ ಹೆಚ್ಚಿಸಲಿಲ್ಲ, ರೈತರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಶ್ರಮಿಕ ವರ್ಗದ ಗೋಳನ್ನು ಕೇಳಲಿಲ್ಲ.
ಆದರೆ, ಇಂಧನ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೂಡಲೇ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.