30,000 ಸಿನಿ ಕಾರ್ಮಿಕರಿಗೆ ಉಚಿತ ಲಸಿಕೆ ನೀಡಲಿರುವ ಆದಿತ್ಯ ಚೋಪ್ರಾ
ಮುಂಬೈ : ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ.
ಇಂತಹ ಸಂದರ್ಭದಲ್ಲಿ ಅನೇಕ ಸಿನಿತಾರೆಯರು , ಉದ್ಯಮಿಗಳು ಜನರಿಗೆ ಸಹಾಯಾಸ್ತ ಚಾಚುತ್ತಿದ್ದಾರೆ. ಇನ್ನೂ ಕೊರೊನಾ ಹಾವಳಿಯಿಂದ ಲಾಕ್ ಡೌನ್ ನಿಂದಾಗಿ ಸಿನಿಮಾರಂಗ ನೆಲಕಚ್ಚಿದೆ. ಆದ್ರೆ ಇದ್ರಿಂದಾಗಿ ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಸಿನಿಮಾರಂಗದ ಕಾರ್ಮಿಕರು.. ಹೀಗಾಗಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಅಂತಹವರಿಗೆ ನೆರವಾಗ್ತಿದ್ದಾರೆ.
ಯಶ್ ಚೋಪ್ರಾ ಫೌಂಡೇಶನ್ ವತಿಯಿಂದ ಹಿಂದಿ ಸಿನಿಮಾ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ಹಾಕಿಸುವುದಾಗಿ ಆದಿತ್ಯ ಚೋಪ್ರಾ ಘೋಷಣೆ ಮಾಡಿದ್ಧಾರೆ. ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿಮಾ ಎಂಪ್ಲೋಯಿಸ್ ಸಂಸ್ಥೆಯಲ್ಲಿ ನೊಂದಾವಣಿ ಮಾಡಿಕೊಂಡಿರುವ 30,000 ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರಿಗೆ ಲಸಿಕೆಗೆ ತಗಲುವ ಪೂರ್ಣ ವೆಚ್ಚವನ್ನು ಭರಿಸುವುದಾಗಿ ಆದಿತ್ಯ ಚೋಪ್ರಾ ಹೇಳಿದ್ದಾರೆ.
ಯಶ್ ರಾಜ್ ಫೌಂಡೇಶನ್ ವತಿಯಿಂದ ಮಹಾರಾಷ್ಟ್ರ ಸಿಎಂ ರಾಜ್ ಠಾಕ್ರೆಗೆ ಪತ್ರ ಬರೆದಿದ್ದು, ಸಿನಿಮಾ ಕಾರ್ಮಿಕರಿಗಾಗಿ ಲಸಿಕೆಯನ್ನು ಖರೀದಿಸಲು ಅನುಮತಿ ಕೊಡಬೇಕು. ಹಾಗೂ ಸಿನಿಮಾ ಕಾರ್ಮಿಕರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಲು ಅವಕಾಶ ಕೊಡಬೇಕು ಎಂದು ಸಹ ಮನವಿ ಮಾಡಲಾಗಿದೆ.
ಲಸಿಕೆ ಹಾಕಲು ತಗಲಬಹುದಾದ ಇತರೆ ವೆಚ್ಚಗಳಾದ ಜಾಗೃತಿ ಮೂಡಿಸುವಿಕೆ, ಲಸಿಕೆ ಸಾಗಾಟದ ವೆಚ್ಚ, ಲಸಿಕೆ ಹಾಕಲು ಸೂಕ್ತ ವ್ಯವಸ್ಥೆ ನಿರ್ಮಾಣ, ಲಸಿಕೆ ದಾಸ್ತಾನು ಇನ್ನಿತರೆ ವೆಚ್ಚಗಳನ್ನು ಸಹ ಯಶ್ ಫೌಂಡೇಶನ್ ಭರಿಸಲಿದೆ ಎಂದು ಹೇಳಿದೆ. ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿ ಹಾಕಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಹಣ ನಿಗದಿ ಪಡಿಸಲಾಗಿದೆ.