ನಾಯಕತ್ವ ಬದಲಾವಣೆ ಗೊಂದಲಗಳಿಗೆ ವರಿಷ್ಠರೇ ತೆರೆ ಎಳೆಯಲಿದ್ದಾರೆ : ಸಿ.ಪಿ.ಯೋಗೇಶ್ವರ್
ಬೆಂಗಳೂರು : ರಾಜ್ಯದ ನಾಯಕತ್ವ ಬದಲಾವಣೆ ಗೊಂದಲಗಳಿಗೆ ಪಕ್ಷದ ವರಿಷ್ಠರೇ ತೆರೆ ಎಳೆಯಲಿದ್ದಾರೆ, ಏನಾಗುತ್ತೋ ಮುಂದಿನ ದಿನಗಳಲ್ಲಿ ನೋಡೋಣ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಇತ್ತ ಬಿ.ಎಸ್.ವೈ ಕೂಡ ಮುಂದಿನ ಎರಡು ವರ್ಷ ನಾನೇ ಸಿಎಂ ಅಂತಾ ಹೇಳಿದ್ದಾರೆ.
ಆದರೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ. ಈ ವಿಚಾರವಾಗಿ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಇನ್ನೂ ಎರಡು ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪನವರೇ ಹೇಳಿರುವಾಗ ನಮ್ಮದೇನಿದೆ.
ಅವರೇ ಸ್ಪಷ್ಟವಾಗಿ ಉತ್ತರ ರವಾನಿಸಿದ್ದಾರೆ. ಹಾಗಾಗಿ ಈ ವಿಚಾರದ ಬಗ್ಗೆ ಚರ್ಚೆ ಗೊಂದಲಗಳಿಲ್ಲ. ಸಣ್ಣ ಪುಟ್ಟ ಗೊಂದಲಗಳ ಬಗ್ಗೆ ವರಿಷ್ಠರು ನೋಡಿಕೊಳ್ಳುತ್ತಾರೆ. ಅವರೇ ಎಲ್ಲದಕ್ಕೂ ತೆರೆ ಎಳೆಯುತ್ತಾರೆ ಎಂದರು.
ಇನ್ನು ಅರವಿಂದ್ ಬೆಲ್ಲದ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದು, ನಾಯಕರು ಹಾಗೂ ಶಾಸಕರ ಭೇಟಿ ಮಾಡಲಿದ್ದಾರೆ. ನಾನೂ ಕೂಡ ಅರುಣ್ ಸಿಂಗ್ ಭೇಟಿಯಾಗಲಿದ್ದೇನೆ ಎಂದು ಹೇಳಿದರು.