ಚಿಕ್ಕೋಡಿ | ಬಾವಿಗೆ ಬಿದ್ದ ಮೊಸಳೆ ರಕ್ಷಣೆ
ಚಿಕ್ಕೋಡಿ : ಬಾವಿಯಲ್ಲಿ ಸಿಲುಕಿದ್ದ ಬೃಹತ್ ಆಕಾರದ ಮೊಸಳೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ನಡೆದಿದೆ.
ಕೋಚರಿ ಗ್ರಾಮದ ರೈತ ರಾವಸಾಹೇಬ ಮಗದುಮ್ಮ ಎಂಬುವವರ ಹೊಲದಲ್ಲಿನ ಬಾವಿಯಲ್ಲಿ ಕಳೆದ ಒಂದು ವಾರದ ಹಿಂದೆ ಆಹಾರ ಅರಿಸಿ ಹಿರಣ್ಯಕೇಶಿ ನದಿಯಿಂದ ಮೊಸಳೆಯೊಂದು ಬಾವಿಯಲ್ಲಿ ಸೇರಿಕೊಂಡಿತ್ತು.
ಇದನ್ನ ಕಂಡ ಇಲ್ಲಿನ ರೈತರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು, ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯಲ್ಲಿರುವ ಬೃಹತ್ ಗಾತ್ರದ ಮೊಸಳೆಯನ್ನ ಸೆರೆ ಹಿಡಿಯಲು ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಿದ್ದರು.
ಆದರೆ ಚಾಲಾಕಿ ಮೊಸಳೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳದೆ ತಪ್ಪಿಸಿಕೊಂಡು ಬಾವಿಯಲ್ಲಿ ಅವಿತು ಕುಳಿತಿತ್ತು.
ಮೊಸಳೆ ಸೆರೆ ಸಿಗದೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.ಸುಮಾರು 10 ಅಡಿ ಉದ್ದದ ಬೃಹತ್ ಮೊಸಳೆ ಇದಾಗಿತ್ತು.
ಸತತ ಒಂದು ವಾರಗಳ ಕಾಲ ಕಾರ್ಯಾಚರಣೆ ಬಳಿಕ ಮೊಸಳೆಯನ್ನ ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಯಶಸ್ವಿಯಾಗಿದ್ದಾರೆ.
ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆ ನೋವಾಗಿದ್ದ ಚಾಲಾಕಿ ಮೊಸಳೆ ಸೆರೆ ಸಿಕ್ಕಿದ್ದು ಆತಂಕದಲ್ಲಿದ್ದ ಗ್ರಾಮಸ್ಥರು ನಿರಾಳರಾಗಿದ್ದಾರೆ.