ಪರೀಕ್ಷೆ ಬರೆಯಲು ಬಾಲಕಿಯ ತಾಳಿ, ಕಾಲುಂಗುರ ತೆಗೆದು ಕಳುಹಿಸಿದ ಪೋಷಕರು
ಮಂಡ್ಯ: ಬಾಲ್ಯ ವಿವಾಹ ಮಾಡಿದ್ದು ಹೊರಗಡೆ ತಿಳಿದರೆ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತೆ ಎಂದು ಪೋಷಕರು ಬಾಲಕಿಯ ತಾಳಿ ತಗೆದು 10ನೇ ತರಗತಿ ಪರೀಕ್ಷೆ ಬರೆಯಲು ಕಳುಹಿಸಿರುವ ಘಟನೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಗೆ ಮಾರ್ಚ 27 ರಂದು ಪೋಷಕರು ಕೆಆರ್. ಪೇಟ್ ತಾಲೂಕಿನ ಸಂಬಂಧಿ ಯವಕನೊಂದಿಗೆ ಗುಟ್ಟಾಗಿ ಮನೆಯಲ್ಲೇ ಸಾರ್ವಜನಿಕರಿಗೆ ತಿಳಸದೆ ಮದುವೆ ಮಾಡಿದ್ದಾರೆ. ಮರುದಿನ ಮಾ 28ರಂದು ಪರೀಕ್ಷೆ ಇದ್ದಿದ್ದರಿಂದ, ಬಾಲಕಿಯ ತಾಳಿ, ಕಾಲುಂಗುರ ತೆಗೆದು ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ.
ಪರೀಕ್ಷೆ ಬರೆಯಲು ಹೋದಾಗ ಬಾಲಕಿ ತನ್ನ ಸ್ನೇಹಿತೆಗೆ ಮದುವೆಯಾಗಿರುವುದಾಗಿ ಹೇಳಿದ್ದಾಳೆ. ಮಾಹಿತಿ ಬಹಿರಂಗಗೊಂಡ ಬಳಿಕ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿ ಇದ್ದಾಳೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರನ್ನು ನೀಡಿದ್ದಾರೆ.
ಬಾಲಕಿಗೆ ಮದುವೆ ನಿಶ್ಚಯವಾಗಿದೆ ಎಂದು ಕಂಪ್ಲೇಂಟ್ ಬಂದ ಹಿನ್ನೆಲೆಯಲ್ಲಿ ಮಾರ್ಚ್ 18 ಮತ್ತು 25 ರಂದು ಅಧಿಕಾರಿಗಳು ಬಾಲಕಿ ಮನೆಗೆ ಭೇಟಿ ನೀಡಿ ವಾರ್ನಿಂಗ್ ನೀಡಿದ್ದರು. ಆದರೂ ಪೋಷಕರು ಅಧಿಕಾರಿಗಳ ಬುದ್ದಿ ಮಾತಿಗೂ ಕೇರ್ ಮಾಡದೇ 27ರಂದು ಬಾಲಕಿಗೆ ಕದ್ದು ವಿವಾಹ ಮಾಡಿದ್ದರು.