ಮುಂದುವರಿದ ಚೀನಾ ಕಿತಾಪತಿ : ಬ್ರಹ್ಮಪುತ್ರದ ಮೇಲೆ ಭಾರಿ ಪ್ರಾಜೆಕ್ಟ್
ಬೀಜಿಂಗ್ : ಪೂರ್ವ ಲಡಾಕ್ನಲ್ಲಿ ಉದ್ವಿಗ್ನತೆ ಸಂಪೂರ್ಣವಾಗಿ ತಣ್ಣಗಾಗುವ ಮುನ್ನವೇ ಚೀನಾ ಮತ್ತೊಂದು ವಿವಾದಕ್ಕೆ ನಾಂದಿಯಾಡಿದೆ. ಟಿಬೆಟ್ನಿಂದ ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿಯ ಕೆಳಭಾಗದಲ್ಲಿ ಅರುಣಾಚಲ ಪ್ರದೇಶದ ಅತ್ಯಂತ ಸಮೀಪದಲ್ಲಿ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಾಣಕ್ಕೆ ಚೀನಾ ಸಂಸತ್ತು ಅನುಮೋದನೆ ನೀಡಿದೆ. ಚೀನಾದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ (ಸಿಪಿಸಿ) ಗುರುವಾರ 14 ನೇ ಪಂಚವಾರ್ಷಿಕ ಯೋಜನೆಗೆ ಅನುಮೋದನೆ ನೀಡಿದೆ.
ಇದರಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ಕೂಡ ಇದೆ. ಕಳೆದ ವರ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಅನುಮೋದಿಸಿದ ನೀಲನಕ್ಷೆಯನ್ನು ಇದೀಗ ಆ ದೇಶದ ಸಂಸತ್ತು ಯಥಾವತ್ತಾಗಿ ಅಂಗೀಕರಿಸಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಪ್ರಧಾನಿ ಲಿ ಕೆಕಿಯಾಂಗ್ ಮತ್ತು ಇತರ 2,000 ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿದ್ದರು.
ಈ ವರ್ಷ ಬ್ರಹ್ಮಪುತ್ರದ ಮೇಲೆ ಅಣೆಕಟ್ಟು ನಿರ್ಮಾಣ ಪ್ರಾರಂಭವಾಗಲಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಟಿಬೆಟ್ ಸ್ವಾಯತ್ತ ಪ್ರದೇಶದ ಉಪ ಮುಖ್ಯಸ್ಥ ಚೆ ದಲ್ಹಾ ಈಗಾಗಲೇ ಘೋಷಿಸಿದ್ದಾರೆ.
ಆದ್ರೆ ಚೀನಾದ ಈ ನಡೆಗೆ ಟಿಬೆಟಿಯನ್ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬ್ರಹ್ಮಪುತ್ರ ನದಿಯನ್ನು ಟಿಬೆಟಿಯನ್ ಜನರು ಡೋರ್ಜಿ ಪಾಗ್ಮೋ ದೇವತೆಯ ದೇಹವೆಂದು ಪೂಜಿಸುತ್ತಾರೆ. ಈ ನದಿಗೆ ಟಿಬೆಟಿಯನ್ ಸಂಸ್ಕøತಿ ಮತ್ತು ಸಂಪ್ರದಾಯಗಳಲ್ಲಿ ವಿಶೇಷ ಮಹತ್ವವಿದೆ.
ಪಶ್ಚಿಮ ಟಿಬೆಟ್ನ ಹಿಮನದಿಗಳಲ್ಲಿ ಹುಟ್ಟಿದ ಬ್ರಹ್ಮಪುತ್ರ ನದಿ ಸಮುದ್ರ ಮಟ್ಟದಿಂದ 5,000 ಮೀಟರ್ ಎತ್ತರದಲ್ಲಿ ಹರಿಯುತ್ತದೆ. ಇದು ವಿಶ್ವದ ಅತಿ ಎತ್ತರದ ನದಿ. ಚೀನಾದ ಯಾಂಗ್ಟ್ಜಿ ನದಿಯಲ್ಲಿ ನಿರ್ಮಿಸಲಾದ ತ್ರೀ ಗೋರ್ಜಸ್ ಅಣೆಕಟ್ಟು ವಿಶ್ವದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಗಳಲ್ಲಿ ಒಂದಾಗಿದೆ.ಬ್ರಹ್ಮಪುತ್ರದಲ್ಲಿ ನಿರ್ಮಿಸಲಿರುವ ಜಲವಿದ್ಯುತ್ ಸ್ಥಾವರವು ತ್ರಿ ಗೋರ್ಜಸ್ ಅಣೆಕಟ್ಟಿಗಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ. ಈ ಯೋಜನೆಯಿಂದ ಸುಮಾರು 14,000 ಜನರು ನಿರಾಶ್ರಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದಲ್ಲದೆ ಚೀನಾದ ಈ ಯೋಜನೆಗೆ ಭಾರತ ಮತ್ತು ಬಾಂಗ್ಲಾದೇಶ ಆಕ್ಷೇಪ ವ್ಯಕ್ತಪಡಿಸಿವೆ. ಟಿಬೆಟ್ನಲ್ಲಿ ಜನಿಸಿದ ಬ್ರಹ್ಮಪುತ್ರ ಭಾರತ ಮತ್ತು ಬಾಂಗ್ಲಾದೇಶದ ನೀರಿನ ಅಗತ್ಯಗಳನ್ನು ಪೂರೈಸುತ್ತಿದೆ. ಚೀನಾ ಒಂದು ವೇಳೆ ಅಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಿದ್ರೆ ಅರುಣಾಚಲ ಭಾಗದಲ್ಲಿ ನೀರಿನ ಅತೀವೃಷ್ಠಿ, ಅನಾವೃಷ್ಠಿ ಆಗುವ ಸಾಧ್ಯತೆಗಳಿವೆ.