ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ : ಸಿದ್ದರಾಮಯ್ಯ Siddaramaiah saaksha tv
ಬೆಂಗಳೂರು : ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಲ್ಲಿದ್ದಲಿನ ಅಭಾವ ಉಂಟಾಗಿದ್ದು, ಕರೆಂಟ್ ವ್ಯತ್ಯಯವಾಗಲಿದೆ ಎಂಬ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ದೇಶದಲ್ಲಿ ಕಲ್ಲಿದ್ದಲು ಅಭಾವದ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ.
ಈಗಿನ ಕೊರತೆಗೆ ಮಳೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆ ಹೆಚ್ಚಳ ಎಂಬ ಕಾರಣಗಳನ್ನು ಕೇಂದ್ರ ಬಿಜೆಪಿ ಸರ್ಕಾರ ನೀಡಿದರೂ ಸುಳ್ಳುಗಳಿಗೆ ಕುಖ್ಯಾತಿ ಪಡೆದಿರುವ ಈ ಸರ್ಕಾರದ ಹೇಳಿಕೆಗಳನ್ನು ಜನ ನಂಬುತ್ತಿಲ್ಲ.
ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು. ಕಲ್ಲಿದ್ದಲು ಅಭಾವದ ಕಾರಣವೊಡ್ಡಿ ವಿದ್ಯುತ್ ಪೂರೈಸುವ ಕಂಪೆನಿಗಳ ಜೊತೆ ಷಾಮೀಲಾಗಿ ವಿದ್ಯುತ್ ದರವನ್ನು ಏರಿಸುವ ಹುನ್ನಾರ ಇರಬಹುದೇ ಎಂದು ಜನ ಸಂಶಯಪಡುತ್ತಿದ್ದಾರೆ.
ನಮ್ಮಲ್ಲಿ ಬೇಡಿಕೆಗಿಂತ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದ ಕಾರಣದಿಂದ ಕೆಲವು ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಲಾಗಿತ್ತು.
ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕಲ್ಲಿದ್ದಲಿನ ಕೃತಕ ಅಭಾವ ಸೃಷ್ಟಿ ಮಾಡಿದ್ದರೆ ಅದಕ್ಕೆ ನನ್ನ ವಿರೋಧವಿದೆ.
2013ರ ಮೊದಲು ನಿರಂತರ ವಿದ್ಯುತ್ ಕಡಿತದಿಂದಾಗಿ ಕರ್ನಾಟಕ ಕಗ್ಗತ್ತಲ ರಾಜ್ಯವಾಗಿತ್ತು. ಅದರ ನಂತರದ ಐದು ವರ್ಷಗಳ ಕಾಲದ ನಮ್ಮ ಆಡಳಿತದಲ್ಲಿ ವಿದ್ಯುತ್ ಪೂರೈಕೆ ಸುಗಮವಾಗಿತ್ತು.
ಈಗ ಮತ್ತೆ ರಾಜ್ಯ ಕಗ್ಗತ್ತಲ ದಿನಗಳಿಗೆ ಮರಳಲಿದೆಯೇ ಎಂದು ಜನ ಆತಂಕ ಪಡುವಂತಾಗಿದೆ ಎಂದು ಬರೆದುಕೊಂಡಿದ್ದಾರೆ