ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ : ಹೆಚ್ ಡಿ ಕುಮಾರಸ್ವಾಮಿ
ಮೈಸೂರು : ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ, ಅದನ್ನೆಲ್ಲ ನಾನು ನಂಬುವುದಿಲ್ಲ ಅಂತಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರಮುಖ ಪಾತ್ರವಹಿಸಿದ್ದರು. ಈ ಕುರಿತು ಕಾಂಗ್ರೆಸ್ ನಲ್ಲಿ ಭಿನ್ನಮತ ಏರ್ಪಟ್ಟಿತ್ತು.
ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ತನ್ವೀರ್ ಸೇಠ್ ಜೊತೆಗೆ ನಾವಿದ್ದೇವೆ. ಅವರು ರಾಜಕೀಯವಾಗಿ ಅನಾನುಕೂಲವಾಗಿ ತಪ್ಪಲಿಯಾದಾಗ ಜೆಡಿಎಸ್ ಅವರಿಗೆ ಸಂಪೂರ್ಣವಾಗಿ ರಕ್ಷಣೆ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ. ಅದನ್ನೆಲ್ಲ ನಂಬುವುದಿಲ್ಲ. ಕಾಂಗ್ರೆಸ್ ನಾಯಕರು ತನ್ವೀರ್ ಸೇಠ್ ಮೇಲೆ ಅಸಮಾಧಾನಗೊಂಡಿರಬಹುದು. ಆದರೆ ಅವರ ಜೊತೆಯಲ್ಲಿ ನಾವಿದ್ದೇವೆ.
ಶಾಸಕ ತನ್ವೀರ್ ಸೇಠ್, ಈಗಿನ ಕೆಟ್ಟ ಶಕ್ತಿಗಳನ್ನು ದೂರವಿಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಹೆಚ್ ಡಿಕೆ, ಇದೇ ವೇಳೆ ಹೆಸರು ಹೇಳದೆ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.
ಒಂದು ಕಡೆ ಬಿಜೆಪಿಯನ್ನ ದೂರ ಇಡುತ್ತೇವೆ ಅಂತಾ ಹೇಳುವ ಮಹಾನುಭಾವ, ಇನ್ನೊಂದೆಡೆ ಜೆಡಿಎಸ್ ನ ದೂರ ಇಟ್ಟು, ಅದರೊಂದಿಗೆ ಕೈ ಜೋಡಿಸಬೇಡಿ ಎನ್ನುತ್ತಾರೆ ಎಂದು ಹೇಳಿದರು.
ಇನ್ನು ತನ್ವೀರ್ ಸೇಠ್ ಸ್ಥಳೀಯವಾಗಿ ಬಿಜೆಪಿಯನ್ನ ದೂರವಿಡಲು ಮುಂದಾದವರು. ಅವರಿಗೆ ರಾಜಕೀಯವಾಗಿ ಅನಾನುಕೂಲವಾಗಿ ತಬ್ಬಲಿಯಾದಾಗ ಅವರ ಜೊತೆ ಜೆಡಿಎಸ್ ಇರುತ್ತೆ. ಆದ್ರೆ ಈಗ ಅವರಿಗೆ ಅದರ ಅವಶ್ಯತೆ ಇಲ್ಲ.
ಅವರಿಗೆ ಅವರದ್ದೇಯಾದ ಶಕ್ತಿ ಇದೆ. ಕ್ಷೇತ್ರದಲ್ಲಿ ಅವರದ್ದೇಯಾದ ವ್ಯಕ್ತಿತ್ವದ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಚುನಾವಣೆಗಳಲ್ಲಿ ಅವರನ್ನ ಸೋಲಿಸಬೇಕು ಅಂತಾ ನಾವು ಕೂಡ ಪ್ರಯತ್ನಿಸಿ ವಿಫಲರಾಗಿದ್ದೇವೆ.
ಮೇಯರ್ ಚುನಾವಣೆಯಲ್ಲಿ ಅವರು ನಮಗೆ ಬೆಂಬಲ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಅನಾನುಕೂಲವಾದರೇ ಅವರಪರ ನಾವು ನಿಲ್ಲಲಿದ್ದೇವೆ ಎಂದು ಕುಮಾರಸ್ವಾಮಿ ಅಭಯ ನೀಡಿದರು.