ಸಿದ್ಧರಾಗಿರಿ.. ಕೋವಿಡ್ ನಿಯಂತ್ರಣಕ್ಕೆ ಬಂದ ತಕ್ಷಣ ಮತ್ತೆ ಹೋರಾಟ : ಡಿ.ಕೆ.ಶಿವಕುಮಾರ್
ಬೆಂಗಳೂರು : ಇದು ಕೊನೆಯಲ್ಲ, ಮತ್ತೊಂದು ಐತಿಹಾಸಿಕ ಹೆಜ್ಜೆಗೆ ಮುನ್ನುಡಿ. ತಾವುಗಳೂ ಸಿದ್ಧರಾಗಿರಿ. ಕೋವಿಡ್ ನಿಯಂತ್ರಣಕ್ಕೆ ಬಂದ ತಕ್ಷಣ ಮತ್ತೆ ಹೋರಾಟ ಮುಂದುವರಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಟ್ವೀಟ್ ಮಾಡಿರುವ ಕಾಂಗ್ರೆಸ್, ನೀರಿಗಾಗಿ, ರೈತರ ಬದುಕಿಗಾಗಿ ಮೇಕೆದಾಟಿನಿಂದ ಹಮ್ಮಿಕೊಂಡಿದ್ದ ‘ನಮ್ಮ ನೀರು ನಮ್ಮ ಹಕ್ಕು’ ಪಾದಯಾತ್ರೆಯಲ್ಲಿ ನೀವೆಲ್ಲಾ ಭಾಗವಹಿಸಿ ಇತಿಹಾಸದ ಪುಟ ಸೇರಿದ್ದೀರಿ. ನಿಮ್ಮ ಸ್ಫೂರ್ತಿ, ಬೆಂಬಲದ ಋಣ ನಮ್ಮ ಮೇಲಿದೆ.ಸರ್ಕಾರ ಪಾದಯಾತ್ರೆಯನ್ನು ನಿಲ್ಲಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ತಾವುಗಳು ಜಗ್ಗದೆ ಹೆಜ್ಜೆ ಹಾಕಿದ್ದೀರಿ.
ಸರ್ಕಾರದ ಆದೇಶಗಳು, ಒತ್ತಡಗಳು, ನ್ಯಾಯಾಲಯದ ನಿರ್ದೇಶನಗಳ ಕಾರಣಕ್ಕೆ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ.
ಇದು ಕೊನೆಯಲ್ಲ, ಮತ್ತೊಂದು ಐತಿಹಾಸಿಕ ಹೆಜ್ಜೆಗೆ ಮುನ್ನುಡಿ. ತಾವುಗಳೂ ಸಿದ್ಧರಾಗಿರಿ. ಕೋವಿಡ್ ನಿಯಂತ್ರಣಕ್ಕೆ ಬಂದ ತಕ್ಷಣ ಮತ್ತೆ ಹೋರಾಟ ಮುಂದುವರಿಯಲಿದೆ. ನಿಮ್ಮ ಬೆಂಬಲ, ಆಶೀರ್ವಾದ ಹೀಗೇ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ರೈತನ ಬದುಕಿಗಾಗಿ, ಬೆಂಗಳೂರಿನ ಜನರ ಕುಡಿಯುವ ನೀರಿಗಾಗಿ ನಮ್ಮ ನೀರು ನಮ್ಮ ಹಕ್ಕು ಹೋರಾಟ ಹಮ್ಮಿಕೊಂಡಿದ್ದೆವು. ಸರ್ಕಾರದ ಅನೇಕ ಕಿರುಕುಳಗಳ ಮಧ್ಯೆ ನಾವು ಪಾದಯಾತ್ರೆ ನಡೆಸಿದೆವು.ಜನರ ಆರೋಗ್ಯದ ದೃಷ್ಟಿಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಹೋರಾಟ ಆರಂಭಿಸುತ್ತೇವೆ.
ಮೇಕೆದಾಟು ಮಾಡಲಿ ಬಿಡಲಿ, ನನ್ನ ಮೇಲೆ ಅವರು ಏನೆಲ್ಲಾ ಪ್ರಯೋಗ ಮಾಡಬಹುದೋ ಅದನ್ನು ಮಾಡುತ್ತಿದ್ದಾರೆ.ಇದಕ್ಕೆ ಕೊನೆ ಇಲ್ಲ, ನಾವು ಇದನ್ನು ಎದುರಿಸಲು ಸಿದ್ಧರಿದ್ದೇವೆ.ಪ್ರಕರಣ ದಾಖಲಿಸುವುದಾದರೆ ಒಟ್ಟಿಗೇ ದಾಖಲಿಸಬಹುದಿತ್ತು, ದಿನಕ್ಕೊಂದು ಕೇಸ್ ಯಾಕೆ? ಎಲ್ಲರ ಮೇಲೂ ಕೇಸ್ ಹಾಕಲಿ, ಬಿಜೆಪಿ ನಾಯಕರ ಮೇಲೆ ಕೇಸ್ ಏಕಿಲ್ಲ?
ಬಿಜೆಪಿ ಕಾರ್ಯಕ್ರಮಗಳಲ್ಲಿ ಕೇವಲ 30 ಜನ ಮಾತ್ರ ಇದ್ದರಾ?ಸಿಎಂ ರಾಮನಗರ ಕಾರ್ಯಕ್ರಮಕ್ಕೆ ಬಂದ ದಿನವೇ ಆದೇಶ ಬಂದಿದ್ದು, ಅವರ ಮೇಲೂ ಕೇಸ್ ದಾಖಲಾಗಬೇಕಲ್ಲವೇ? ವಿಧಾನಸೌಧ ಕಾರ್ಯಕ್ರಮದ ವಿರುದ್ಧ ಕೇಸ್ ಹಾಕಿದ್ದಾರಾ?ಜನಾಶೀರ್ವಾದ ಯಾತ್ರೆ ವಿಚಾರದಲ್ಲಿ ಮಂತ್ರಿಗಳ ವಿರುದ್ಧ ಕ್ರಮ ಯಾಕಿಲ್ಲ? ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.