ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ : ಸಿದ್ದರಾಮಯ್ಯ
ಬೆಂಗಳೂರು : ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ. ದೇಶಕ್ಕೆ ಸ್ವತಂತ್ರ ಬರಲು ಕಾಂಗ್ರೆಸ್ ಕಾರಣ. ಸ್ವತಂತ್ರ ಬಂದಿದಕ್ಕೆ ಮೋದಿ ಪ್ರಧಾನಿಯಾಗಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಇಂದು ಇಂದಿರಾಗಾಂಧಿ ಹುತಾತ್ಮರಾದ ದಿನ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ. ಇಂದಿರಾ ಗಾಂಧಿ ಉಕ್ಕಿನ ಮಹಿಳೆಯಾದರೆ, ಪಟೇಲ್ ಉಕ್ಕಿನ ಮನುಷ್ಯ ಎಂದು ನುಡಿದರು.
ಬಳಿಕ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ. ದೇಶಕ್ಕೆ ಸ್ವತಂತ್ರ ಬರಲು ಕಾಂಗ್ರೆಸ್ ಕಾರಣ. ಸ್ವತಂತ್ರ ಬಂದಿದಕ್ಕೆ ಮೋದಿ ಪ್ರಧಾನಿಯಾಗಿದ್ದು, ದೇಶದಲ್ಲಿ ಡಿಜಿಟಲ್ ವ್ಯವಸ್ಥೆ ಆರಂಭಕ್ಕೆ ಮೂಲ ರಾಜೀವ್ ಗಾಂಧಿ, ಇಂದು ನಾವೆಲ್ಲ ಫೋನ್ ನಲ್ಲಿ ಮಾತನಾಡುತ್ತಿರುವುದಕ್ಕೆ ಪ್ರಮುಖ ಕಾರಣ ಎಂದರು.
ಇನ್ನು ಇಂದಿರಾ ಗಾಂಧಿ 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಗರೀಬಿ ಹಠಾವೋ ಜಾರಿ ಮಾಡಿದ್ರು, ರೈತರು, ಮಹಿಳೆಯರಿಗೆ ಅನೇಕ ಕಾರ್ಯಕ್ರಮ ಜಾರಿ ಮಾಡಿದ್ದರು. ಉಳುವವನೆ ಭೂಮಿ ಒಡೆಯ ಕಾಯ್ದೆ ಪ್ರಮಾಣಿಕವಾಗಿ ಜಾರಿ ಮಾಡಿದ್ದರು ಎಂದು ಇಂದಿರಾ ಗಾಂಧಿ ಅವರ ಯೋಜನೆಗಳನ್ನು ಸ್ಮರಿಸಿದರು.
ಬಿಜೆಪಿ ನಾಯಕರು ಅಂಬೇಡ್ಕರ್ ಅವರನ್ನು ಸೋಲಿಸಿದ್ರು ಅಂತಾ ದಲಿತರನ್ನು ಎತ್ತಿಕಟ್ತಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ವಿಚಾರದಲ್ಲೂ ರಾಜಕೀಯ ಮಾಡ್ತಾರೆ ಎಂದು ಆರೋಪಿಸಿದರು.