* 30 ನಿಮಿಷದೊಳಗೆ ಮುಗಿದು ಹೋದ ಜಂಬೂಸವಾರಿ
*ಬೆರಳೆಣಿಗೆ ಮಂದಿ ಐತಿಹ್ಯ ಕ್ಷಣಕ್ಕೆ ಸಾಕ್ಷಿ
* ಕೊರೊನಾ ನಿಯಮಾನುಸಾರವೇ ನಡೆದ ದಸರಾ ಕಾರ್ಯಕ್ರಮ
*ಸಿಎಂ ಸೇರಿ ಗಣ್ಯರಿಂದ ನಾಡ ಅಧಿದೇವಿಗೆ ಪುಷ್ಪ ನಮನ
ಮೈಸೂರು: ಅಂತೂ ಇಂತು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಯಾವುದೇ ವಿಘ್ನಗಳಿಲ್ಲದೆ ಸಮಾಪ್ತಿಗೊಂಡು ಐತಿಹ್ಯದ ಪುಟದಲ್ಲಿ ದಾಖಲಾಗಿದೆ. ಕೊರೊನಾ ಕಾಟದ ಹಿನ್ನೆಲೆಯಲ್ಲಿ 410 ನೇ ದಸರಾ ಸರಳವಾಗಿ ಜರುಗುವ ಮೂಲಕ ಇತಿಹಾಸದ ಪುಟದಲ್ಲಿ ಹೊಸ ಭಾಷ್ಯದೊಂದಿಗೆ ಅಂತ್ಯವಾಗಿದೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಕೊರೊನಾ ಮಹಾಮಾರಿಯ ಆತಂಕದ ನಡುವೆಯೂ ಯಶಸ್ವಿಯಾಗಿ ಜರುಗಿ ಇತಿಹಾಸದ ಪುಟದಲ್ಲಿ ದಾಖಲಾಯಿತು. ಕೊರೊನಾ ಗೈಡ್ಲೈನ್ಸ್ ನಿಯಮಾನುಸಾರ 300 ಮಂದಿ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅದರಂತೆ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ತಂದವರನ್ನ ಮಾತ್ರ ಅರಮನೆಗೆ ಪ್ರವೇಶ ನೀಡಲಾಗಿತ್ತು. ಇಷ್ಟೆಲ್ಲದರ ನಡುವೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಟೈಸರ್ಗೆ ಮಹತ್ವ ನೀಡಲಾಗಿತ್ತು.
ಸಂಪ್ರದಾಯದಂತೆ ಮಧ್ಯಾಹ್ನ 3.30ರ ಸುಮಾರಿಗೆ ಶುಭ ಮಕರ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆ ಎದುರು ನಿರ್ಮಿಸಿದ್ದ ವೇದಿಕೆ ಬಳಿ ಆಗಮಿಸಿದರು. 750 ಕೆಜಿ ತೂಕದ ರತ್ನ ಖಚಿತ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತ ತಾಯಿ ಚಾಮುಂಡಿ ಹೊತ್ತ ಅಭಿಮನ್ಯು ದಕ್ಷಿಣಾಭಿಮುಖವಾಗಿ ತಿರುಗಿ ವೇದಿಕೆ ಬಳಿ ಆಗಮಿಸುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಗಣ್ಯರ ತಂಡ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾಡಳಿತದ ವತಿಯಿಂದ ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪುಷ್ಪಾರ್ಚನೆ ವೇಳೆ ಮೊಳಗಿದ ನಾಡಗೀತೆಗೆ ಕ್ಯಾ.ಅಭಿಮನ್ಯುವಿನಿಂದ ವಂದನೆ ಸ್ವೀಕರಿಸಲಾಯಿತು. ಈ ವೇಳೆ ಫಿರಂಗಿ ಮೂಲಕ ಏಳು ಸುತ್ತಿನ ಸಿಡಿಮದ್ದು ಸಿಡಿಸಲಾಯಿತು.
ಬಳಿಕ ನಿಶಾನೆ ಆನೆಗಳು, ನಾದಸ್ವರ , ಚಂಡೇಮೇಳ, ಮರಗಾಲು, ವೀರಗಾಸೆ, ಚಿಲಿಪಿಲಿ ಗೊಂಬೆ, ಕರ್ನಾಟಕ ಬ್ಯಾಂಡ್, ಅಶ್ವದಳ ತಂಡಗಳು ಅಂಬಾರಿ ನಂತರ ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಿದ್ದವು.
ಜಂಬೂಸವಾರಿ ವೇಳೆ ಎರಡೇ ಸ್ತಬ್ಧಚಿತ್ರ…!
ಈ ಬಾರಿ ಸರಳ ದಸರಾ ಹಿನ್ನೆಲೆಯಲ್ಲಿ ಎರಡು ಸ್ತಬ್ಧ ಚಿತ್ರಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಮೈಸೂರು ಜಿಲ್ಲಾ ಪಂಚಾಯಿತಿ ವತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ರೂಪುಗೊಳಿಸಲಾಗಿತ್ತು. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೊರೊನಾ ಯೋಧರ ಸೇವೆ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು.
ಆನೆ ಬಂಡಿ ಸ್ತಬ್ಧಚಿತ್ರ ಮತ್ತೊಂದು ವಿಶೇಷವಾಗಿದೆ. ಅರಮನೆ ವಾದ್ಯಗೋಷ್ಠಿ ಕುರಿತಾದ ಚಿತ್ರವೇ ಆನೆ ಬಂಡಿ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸರಳ ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಜಂಬೂಸವಾರಿ ಮೆರವಣಿಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ 30-40 ನಿಮಿಷಗಳ ಅವಧಿಯಲ್ಲಿ ಮೆರವಣಿಗೆ ಮುಗಿದು ಹೋಯಿತು.
ನಿಷೇದಾಜ್ಞೆಯಿಂದ ನಿಶ್ಯಬ್ಧವಾದ ಅರಮನೆ ನಗರಿ
ಸರಳ ದಸರಾ ಮಹೋತ್ಸವ ಆಚರಣೆ ಹಿನ್ನೆಲೆ ಮೈಸೂರು ಅರಮನೆ ಸುತ್ತಲೂ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ನಗರದ ಹೃದಯ ಭಾಗಕ್ಕೆ ಬಸ್ ಗಳ ಪ್ರವೇಶಕ್ಕೂ ಅವಕಾಶ ನೀಡದ ಹಿನ್ನೆಲೆ ನಗರ ಬಸ್ ನಿಲ್ದಾಣ ಸ್ಥಬ್ದವಾಗಿತ್ತು.
ನಿಲ್ದಾಣಕ್ಕೆ ಬರುವ ಎಲ್ಲ ಮಾರ್ಗಗಳು ಬಂದ್ ಮಾಡಿದ ಹಿನ್ನೆಲೆ ನಗರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಅಗ್ರಹಾರ, ರಾಮಸ್ವಾಮಿ ಸರ್ಕಲ್, ದಾಸಪ್ಪ ಸರ್ಕಲ್, ಫೈಲಟ್ ಸರ್ಕಲ್, ಗನ್ ಹೌಸ್ ಬಳಿಯಿಂದಲೇ ಬಸ್ ಗಳ ಬೇರೆ ಮಾರ್ಗಗಳಲ್ಲಿ ಸಂಚಾರ ಮಾಡಿದವು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel