ನಿಮ್ಮ ಜೀವಕ್ಕೆ ನೀವೇ ಹೊಣೆ : ಜನರನ್ನ ದಾರಿ ತಪ್ಪಿಸುತ್ತಿದೆ ಸರ್ಕಾರ..!
ಬೆಂಗಳೂರು : ನಿಮ್ಮ ಜೀವಕ್ಕೆ ನೀವೇ ಹೊಣೆ : ಜನರನ್ನ ದಾರಿ ತಪ್ಪಿಸುತ್ತಿದೆ ಸರ್ಕಾರ. ಹೌದು..! ಕೊರೊನಾ ಎರಡನೇ ಅಲೆ ದೇಶದಲ್ಲಿ ಹುಚ್ಚು ಕುದುರೆಯಂತೆ ಜುಮ್ ಜುಮ್ ಅಂತಾ ಓಡುತ್ತಿದೆ. ಲಂಗು ಲಗಾಮಿದಂತೆ ಓಡುತ್ತಿರುವ ಕೊರೊನಾಗೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದರೇ, 2 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸರ್ಕಾರವನ್ನೇ ನಂಬಿಕೊಂಡು ಕೂತರೇ ನಮ್ಮಂತಹ ಮೂರ್ಖರು ಮತ್ಯಾರು ಇರೋದಿಲ್ಲ.
ಯಾಕೆಂದ್ರೆ ಜನರ ದಾರಿ ತಪ್ಪಿಸುತ್ತಿದೆ ಸರ್ಕಾರ..! ಹೌದು..! ಕೊರೊನಾ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದ ಸರ್ಕಾರವೇ ಎರಡು ನಾಲಿಗೆಯ ಹೇಳಿಕೆಗಳನ್ನ ನೀಡುತ್ತಿದೆ. ಒಂದು ಕಡೆ ಕೊರೊನಾದಿಂದ ಧೈರ್ಯವಾಗಿ ಹೋರಾಡಿ, ಮಾಸ್ಕ್ ಧರಿಸಿ, ತಪ್ಪದೇ ಸಾಮಾಜಿಕ ಅಂತರ ಕಾಪಿಟ್ಟುಕೊಳ್ಳಿ ಎಂದು ಉದ್ದೂದ್ದ ಭಾಷಣ ಬಿಗಿಯುವ ನಾಯಕರು, ಚುನಾವಣಾ ರ್ಯಾಲಿಗಳನ್ನ ನಡೆಸುತ್ತಿದ್ದಾರೆ. ಅಧಿಕಾರ ಹಿಡಿಯೊದೊಂದೆ ತಮ್ಮ ಗುರಿ ಎಂಬಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಬೃಹತ್ ರ್ಯಾಲಿಗಳನ್ನ ನಡೆಸುತ್ತಾ ಲಕ್ಷಾಂತರ ಮಂದಿಯನ್ನ ಒಂದು ಕಡೆ ಸೇರುವಂತೆ ಮಾಡುತ್ತಿದೆ. ಶಕ್ತಿ ಪ್ರದರ್ಶನದ ಹೆಸರಲ್ಲಿ ಲಕ್ಷಾಂತರ ಮಂದಿಯನ್ನ ರ್ಯಾಲಿಗೆ ಬಳಸಿಕೊಂಡು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.
ಇನ್ನು ಕೊರೊನಾ ಮೊದಲ ಅಲೆ ವೇಳೆ ನಿರಂತರವಾಗಿ ಅಧಿಕಾರಿಗಳೊಂದಿಗೆ ಮೀಟಿಂಗ್ ನಡೆಸುತ್ತಿದ್ದ ಪ್ರಧಾನ ಸೇವಕರು, ಈಗ ಹೆಚ್ಚಾಗಿ ಚುನಾವಣಾ ರ್ಯಾಲಿಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೊನಾ ತೀವ್ರ ಸ್ವರೂಪ ಪಡೆದುಕೊಂಡಿದೆ ಅಂತ ಗೊತ್ತಿದ್ದರೂ ಕೂಡ ಪ್ರಚಾರದಲ್ಲಿ ತೊಡಗಿಕೊಂಡು ಜನರಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯಭಾವ ಮೂಡುವಂತೆ ಮಾಡಿದ್ದಾರೆ.
ಕನಿಷ್ಠಪಕ್ಷ ಕೊರೊನಾ ತಡೆಗೆ ಸರ್ಕಾರ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಮಾಡದಿರುವುದು ಅದು ಎಷ್ಟರ ಮಟ್ಟಿಗೆ ಕೊರೊನಾವನ್ನ ಗಂಭೀರವಾಗಿ ತೆಗೆದುಕೊಂಡಿದೆ ಅನ್ನೋದಕ್ಕೆ ಕೈಗನ್ನಡಿಯಾಗಿದೆ. ದೇಶದಲ್ಲಿ ಜನರು ಈಗ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಅಂದ್ರೆ ಅದಕ್ಕೆ ಸರ್ಕಾರದ ನಡೆಗಳೇ ಕಾರಣ ಅನ್ನೋದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯವಾಗಿದೆ.
ನಿಮ್ಮ ಜೀವಕ್ಕೆ ನೀವೇ ಹೊಣೆ
ಸದ್ಯದ ಸರ್ಕಾರದ ನಡೆ ನೋಡಿದ್ರೆ ಅದು ಜನರ ಜೀವಕ್ಕಿಂತ ಚುನಾವಣೆಗಳನ್ನೇ ಹೆಚ್ಚು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜೀವವನ್ನ ನಾವೇ ಉಳಿಸಿಕೊಳ್ಳಬೇಕು. ವದಂತಿಗಳಿಗೆ ಕಿವಿಕೊಡದೇ, ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದೇ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಿಟ್ಟುಕೊಳ್ಳುವುದು, ಅನವಶ್ಯಕವಾಗಿ ಓಡಾದೇ ನಮ್ಮನ್ನ ನಾವೇ ರಕ್ಷಿಸಿಕೊಳ್ಳಬೇಕು.