ಬೆಂಗಳೂರು : ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಜೋರಾಗಿದ್ದು, ಪ್ರತಿದಿನ ರಾಜ್ಯದಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಏತನ್ಮಧ್ಯೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೂ ಮಾರಕ ಕೊರೊನಾ ಸೋಂಕು ಭೀತಿ ಎದುರಾಗಿದೆ.
ಹೆಚ್.ಡಿ.ರೇವಣ್ಣ ಅವರ ಬೆಂಗಾವಲು ಪಡೆಯ ನಾಲ್ವರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಎಸ್ಕಾರ್ಟ್ ವಾಹನದಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಸದ್ಯ ಬೆಂಗಳೂರಿನಲ್ಲಿರುವ ರೇವಣ್ಣರಿಗೂ ಕೊರೊನಾ ಸೋಂಕು ಭೀತಿ ತಟ್ಟಿದೆ. ಹೀಗಾಗಿ ಇಂದು ಹೆಚ್.ಡಿ.ರೇವಣ್ಣ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.