ಬೆಂಗಳೂರು : ‘ಅಯ್ಯೋ ಅವನ, ಇಲ್ಲಿ ಬಂದು ಏನೋ ಮಾತಾಡಿ ಹೋದ್ನಲ್ಲ. ಏ ಕಷಾಯ, ಮಾತ್ರ ತರ್ಸೋ’ ಇವು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಕ್ಕಾಬಿಕ್ಕಿಯಾಗಿ ಹೇಳಿದ ಮಾತುಗಳು.
ಇಂದು ಶಾಂತಿನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಸಿದ್ದರಾಮಯ್ಯ, ಹ್ಯಾರಿಸ್ ಸೇರಿದಂತೆ ಕೈ ಶಾಸಕರು ಭಾಗಿಯಾಗಿದ್ದರು. ಆದ್ರೆ ಶಾಸಕ ಹ್ಯಾರಿಸ್ ಅವರು ಈ ಸಭೆಗೆ ಬರುವುದಕ್ಕೂ ಮೊದಲು ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದರು.
ಗಂಟಲು ದ್ರವದ ಪರೀಕ್ಷೆಗೆ ಒಳಪಟ್ಟು ನೇರವಾಗಿ ಸಭೆಗೆ ಬಂದಿದ್ದ ಹ್ಯಾರಿಸ್ ಗೆ ಮಧ್ಯಾಹ್ನ ಕೊರೊನಾ ಪಾಸಿಟಿವ್ ಎಂದು ಮೆಸೇಜ್ ಬಂದಿದೆ. ಇದನ್ನು ನೋಡಿದ ಹ್ಯಾರಿಸ್ ನನಗೆ ಕೊರೊನಾ ಬಂದಿದೆ. ನಾನು ಹೊರಡುತ್ತೇನೆ ಎಂದು ಅಲ್ಲಿಂದ ಗಡಿಬಿಡಿಯಲ್ಲಿ ಹೋಗಿದ್ದಾರೆ. ಅಲ್ಲಿಗೆ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕರ ಎದೆಬಡಿತ ಜೋರಾಗಿದೆ. ಅದರಲ್ಲೂ ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದ ಸಿದ್ದರಾಮಯ್ಯ ಫುಲ್ ಕಕ್ಕಾಬಿಕ್ಕಿಯಾಗಿದ್ದಾರೆ. ಅಯ್ಯೋ ಅವನ, ಇಲ್ಲಿ ಬಂದು ಏನೋ ಮಾತಾಡಿ ಹೋದ್ನಲ್ಲ. ಏ ಕಷಾಯ ತರಿಸು, ಮಾತ್ರೆ ಇರಬೇಕು ತರಿಸು ಎಂದು ಶಾಸಕ ಬೈರತಿ ಸುರೇಶ್ ಗೆ ಸೂಚಿಸಿದ್ದಾರೆ. ಮೆಸೇಜ್ ಬರುವ ಮೊದಲು ಸಿದ್ದರಾಮಯ್ಯ ಸಮೀಪ ಬಂದ ಹ್ಯಾರಿಸ್ ಕಿವಿಯಲ್ಲಿ ಗುಟ್ಟು ಹೇಳಿದ್ದರು.
ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಬಂದ ಬಳಿಕ ಸಿದ್ದರಾಮಯ್ಯನವರಿಗೂ ಸೋಂಕು ಬಂದಿತ್ತು. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಆಗಸ್ಟ್ 13 ರಂದು ಡಿಸ್ಚಾರ್ಜ್ ಆಗಿದ್ದರು.