ಕೊರೊನಾ ಸಂಕಷ್ಟ : ಜನರ ಸಾವು, ನೋವು , ಆಕ್ರಂದನ ನೋಡಲಾರದೇ ಮನನೊಂದು ವೈದ್ಯ ಆತ್ಮಹತ್ಯೆಗೆ ಶರಣು..!
ನವದೆಹಲಿ: ದೇಶದಲ್ಲಿ ಕೊರೊನಾ 2 ನೇ ಅಲೆ ಅತಿ ಭೀಕರವಾಗಿ ಅಪ್ಪಳಿಸಿದ್ದು, ಎಲ್ಲಿ ನೋಡಿದ್ರು ಸಾವು ನೋವುಗಳು, ತಮ್ಮವರನ್ನ ಕಳೆದುಕೊಂಡವರ ಆಕ್ರಂದನವೇ ಕಾಣಿಸುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ವೈದ್ಯರು ಸಹ ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಆಕ್ಸಿಜನ್ ಕೊರತೆ ಬೆಡ್ ಕೊರತೆ , ಚಿಕಿತ್ಸೆ ಸಿಗದೇ ಸೋಂಕಿತರು ಪ್ರಾಣ ಬಿಡುತ್ತಿದ್ದಾರೆ. ಇತ್ತ ವೈದ್ಯರು ಸಹ ಹಗಲಿರುಳೆನ್ನದೇ ಸೋಂಕಿತರ ರಕ್ಷಣೆಗೆ ತಮ್ಮನ್ನ ತಾವು ಸಮರ್ಪಣೆ ಮಾಡಿದ್ದಾರೆ. ಶಕ್ತಿ ಮೀರಿ ಪ್ರಯತ್ನ ಪಟ್ಟರೂ ಸಾವಿರಾರು ಜನ ಸಾಯುತ್ತಿದ್ದಾರೆ. ಇದ್ರಿಂದಾಗಿ ವೈದ್ಯರು ಕಂಗಾಲಾಗಿದ್ದಾರೆ. ಅನೇಕರು ತೀವ್ರವಾಗಿ ಮನನೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಡಿಯೋಗಳನ್ನ ಮಾಡಿ ಹರಿಬಿಟ್ಟಿದ್ದಾರೆ..
ಆದ್ರೆ ವೈದ್ಯರೊಬ್ಬರು ಜನರ ಸಾವು ನಮೋವು , ಆಕ್ರಂದನ ನೋಡಿ ಬೇಸತ್ತು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಾಜಿ ಮುಖ್ಯಸ್ಥ ಡಾ.ರವಿ ವಾಂಖೇಡ್ಕರ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಡಾ.ವಿವೇಕ್ ರೈ ಅದ್ಭುತ ವೈದ್ಯರಾಗಿದ್ದರು. ಉತ್ತರ ಪ್ರದೇಶದ ಗೋರಖ್ಪುರ ನಿವಾಸಿಯಾಗಿದ್ದರು. ಕೊರೊನಾ ಸಾಂಕ್ರಾಮಿಕ ರೋಗದ ಕಠಿಣ ಸಂದರ್ಭದಲ್ಲಿ ನೂರಾರು ಜನರ ಪ್ರಾಣ ಉಳಿಸಿದ್ದರು. ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಕೊರೊನಾದಿಂದಾಗಿ ಹೆಚ್ಚು ಜನ ಪ್ರಾಣ ಬಿಡುತ್ತಿರುವುದನ್ನು ಕಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಡಾ.ವಾಂಖೇಡ್ಕರ್ ತಿಳಿಸಿದ್ದಾರೆ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ನನ್ನ ಕಣ್ಣೆದುರೇ ಸಾಯುತ್ತಿರುವ ಜನರ ನೋವು ಹಾಗೂ ಭಾವನೆಗಳೊಂದಿಗೆ ಜೀವಿಸುವುದಕ್ಕಿಂತ ಸಾಯುವುದೇ ಮೇಲೆಂದು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ ಎಂದು ಡಾ.ವಾಂಖೆಡ್ಕರ್ ತಿಳಿಸಿದ್ದಾರೆ. ಕೋವಿಡ್ ಬಿಕ್ಕಟ್ಟು ನಿರ್ವಹಿಸುವಾಗ ಭಾವನಾತ್ಮಕ ಒತ್ತಡಗಳು ಎದುರಾಗುತ್ತವೆ. ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿಯೇ ಯುವ ವೈದ್ಯ ಸಾವನ್ನಪ್ಪಿದ್ದಾರೆ. ಇದು ಕೊಲೆಗಿಂತ ಕಡಿಮೆ ಏನಲ್ಲ. ಕೆಟ್ಟ ವಿಜ್ಞಾನ, ಕೆಟ್ಟ ರಾಜಕೀಯ ಹಾಗೂ ಕೆಟ್ಟ ಆಡಳಿತ ಎಂದು ಐಎಂಎ ಮಾಜಿ ಅಧ್ಯಕ್ಷರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.