ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ : ಕೋಟಿ ಕೋಟಿ ವಿದ್ಯುತ್ ಬಿಲ್ ಬಾಕಿ mandya saaksha tv
ಮಂಡ್ಯ : ಸಾರ್ವಜನಿಕರು ವಿದ್ಯುತ್ ಬಿಲ್ ಕಟ್ಟೋದು ಸ್ವಲ್ಪ ವಿಳಂಬ ಆದ್ರೆ ಸಾಕು ಇಲಾಖೆ ಸಿಬ್ಬಂದಿಗಳು ಹಣ ಕಟ್ಟುವಂತೆ ಒತ್ತಡ ಹೇರ್ತಾರೆ.
ಮತ್ತಷ್ಟು ವಿಳಂಬವಾದ್ರೆ ಸಂಪರ್ಕವನ್ನೇ ಕಡಿದು ಹಾಕ್ತಾರೆ. ಜನರ ಮೇಲೆ ಅಧಿಕಾರದ ದರ್ಪತೋರಿಸುವ ಸಿಬ್ಬಂದಿಗಳು ಸರ್ಕಾರಿ ಇಲಾಖೆ ವಿಚಾರಕ್ಕೆ ಬಂದರೇ ನೋಟೀಸ್ ಜಾರಿ ಮಾಡಿಕೊಂಡು ತೆಪ್ಪಗೆ ಬಿದ್ದಿರ್ತಾರೆ.
ಅದಕ್ಕೆ ತಾಜಾ ಉದಾಹರಣೆ ನಂಜನಗೂಡು ವಿಭಾಗದ ಕಾವೇರಿ ನೀರಾವರಿ ನಿಗಮ ನಿಯಮಿತ ಸುಮಾರು ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಇರುವುದು.
ನಂಜನಗೂಡಿನ ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿ 19 ಕೋಟಿಗೂ ಅಧಿಕ ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಬಿಲ್ ಪಾವತಿ ಮಾಡುವಂತೆ ಕಳೆದ ಸೆಪ್ಟೆಂಬರ್ ತಿಂಗಳಿನಿಂದಲೂ ಚೆಸ್ಕಾಂ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ನೋಟೀಸ್ ಕಳಿಸುತ್ತಲೇ ಇದೆ. ಹೀಗಿದ್ದರೂ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ.
ಇದೀಗ ಡಿಸೆಂಬರ್ ಮಾಹೆಯವರೆಗೆ ಬಿಲ್ ಮೊತ್ತ 19,34,36,716/- ರೂ.(ಹತ್ತೊಂಬತ್ತು ಕೋಟಿ ಮೂವತ್ತ ನಾಲ್ಕು ಲಕ್ಷದ ಮೂವತ್ತಾರು ಸಾವಿರದ ಏಳುನೂರ ಹದಿನಾರು) ಆಗಿದೆ.