ದೇಶ, ರಾಜ್ಯದಿಂದ ಬಿಜೆಪಿ ಮುಕ್ತ ನಮ್ಮ ಗುರಿ : ಡಿ.ಕೆ.ಶಿವಕುಮಾರ್
ಬೆಂಗಳೂರು : ದೇಶದಿಂದ, ರಾಜ್ಯದಿಂದ ಬಿಜೆಪಿಯನ್ನು ದೂರ ಇಡುವ ಪ್ರಯತ್ನ ನಮ್ಮದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ಮಧು ಬಂಗಾರಪ್ಪ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ರಾಜಕಾರಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಬೆಂಬಲವಾಗಿದ್ದರು.
ನನ್ನನ್ನು ಬೆಳೆಸಿದ ಧೀಮಂತ ನಾಯಕ ಅವರು. ಯುವಕರನ್ನು ಸೆಳೆಯುವ ಶಕ್ತಿ ಬಂಗಾರಪ್ಪ ಅವರಲ್ಲಿ ಇತ್ತು. ನನ್ನಂತಹ ಅನೇಕ ಜನರನ್ನು ಬಂಗಾರಪ್ಪನವರು ಬೆಳೆಸಿದ್ದಾರೆ, ಕಾಂಗ್ರೆಸ್ ಕಟ್ಟುವಲ್ಲಿ ಬಂಗಾರಪ್ಪ ಅವರು ಪ್ರಮುಖರು.
ಆದರೆ ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ದರು. ಅವರ ಮಗ ಮಧು ಸೆಳೆಯುವ ಪ್ರಯತ್ನ ಮಾಡಿದ್ದೆವು. ಅವರ ತಂದೆ ಕಾಂಗ್ರೆಸ್ ಪಕ್ಷ ಸಂಘಟನೆಗೆ ಬಲ ನೀಡಿದ್ದರು.
ಆಕಾಶದಿಂದ ಬಿದ್ದ ನೀರು ಕೊನೆಗೆ ಸಮುದ್ರಕ್ಕೆ ಸೇರಬೇಕು. ಕಾಂಗ್ರೆಸ್ ಪಕ್ಷ ದೊಡ್ಡ ಸಾಗರ ಇದ್ದಂತೆ. ಹೈಕಮಾಂಡ್ ವರಿಷ್ಠರು ಕೂಡ ಮಧು ಬಂಗಾರಪ್ಪ ಭೇಟಿ ಬಗ್ಗೆ ಸೂಚಿಸಿದ್ದರು. ಹೈಕಮಾಂಡ್ ಕರೆಸಿಕೊಂಡು ಭೇಟಿ ಮಾಡಿದ್ದರು. ಘಳಿಗೆ ಕಾಲ ಈಗ ಕೂಡಿ ಬಂದಿದೆ ಎಂದು ಹೇಳಿದರು.
ಇನ್ನು ನಾವು ಯಾರನ್ನೂ ಟಾರ್ಗೆಟ್ ಮಾಡಲು ಇಷ್ಟವಿಲ್ಲ. ಆಪರೇಷನ್ ಜೆಡಿಎಸ್ ಅನ್ನೋದು ಸುಳ್ಳು. ಕಾಂಗ್ರೆಸ್ ಪಕ್ಷ ಬಲವರ್ಧನೆ ಮಾತ್ರ ಗುರಿ. ದೇಶದಿಂದ, ರಾಜ್ಯದಿಂದ ಬಿಜೆಪಿಯನ್ನು ದೂರ ಇಡುವ ಪ್ರಯತ್ನ ಅಷ್ಟೆ.
ಸಾಕಷ್ಟು ನಾಯಕರ ಜೊತೆ ಮಾತನಾಡುತ್ತಿದ್ದೇನೆ. ಯಾರೆಲ್ಲ ಸೇರ್ಪಡೆಯಾಗಲಿದ್ದಾರೆ ಎಂಬುದು ಈಗಲೇ ಹೇಳುವುದಿಲ್ಲ. ನಮ್ಮ ಸಿದ್ದಾಂತ ಒಪ್ಪಿ ಬನ್ನಿ ಅಂತ, ನಾವು ಒಂದು ಕರೆ ಕೊಟ್ಟಿದ್ವಿ.
ಆ ನಿಟ್ಟಿನಲ್ಲಿ ಕಾಂಗ್ರೆಸ್ ಗೆ ನಾಯಕರು ಬರ್ತಾ ಇದ್ದಾರೆ. ಬಿಜೆಪಿಯನ್ನ ದೂರ ಇಡೋಕೆ ನಾವು ಪ್ರಯತ್ನ ಮಾಡ್ತಾ ಇದ್ದೇವೆ. ನಮ್ಮನ್ನು ಒಪ್ಪಿ ಯಾರೇ ಬಂದ್ರು ಸ್ವಾಗತ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.