ಸೋಲುತ್ತಿದ್ದ ಟೀಮ್ ಇಂಡಿಯಾಗೆ ಗೆಲುವಿನ “ದೀಪ” ಹಚ್ಚಿದ ಚಾಹರ್..!
ಎರಡನೇ ಏಕದಿನ ಪಂದ್ಯದಲ್ಲೂ ಶ್ರೀಲಂಕಾಗೆ ಸೋಲು
ಏಕದಿನ ಸರಣಿಯನ್ನು ಕೈ ವಶಮಾಡಿಕೊಂಡ ಟೀಮ್ ಇಂಡಿಯಾ
ಶ್ರೀಲಂಕಾ ತಂಡದಿಂದ ಗೆಲುವನ್ನು ಕಸಿದುಕೊಂಡ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ವಿಕೆಟ್ ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಅಲ್ಲದೆ 2012ರ ಬಳಿಕ ಸತತವಾಗಿ ಶ್ರೀಲಂಕಾ ನೆಲದಲ್ಲಿ ಸರಣಿ ಗೆದ್ದ ಹಿರಿಮೆಗೂ ಪಾತ್ರವಾಯ್ತು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಇದೀಗ ಟೀಮ್ ಇಂಡಿಯಾ 2-0ಯಿಂದ ಮುನ್ನಡ ಪಡೆದುಕೊಂಡಿದೆ.
ಗೆಲ್ಲಲು 276 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಒಂದು ಹಂತದಲ್ಲಿ 193 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೂ ಸಿಲುಕಿತ್ತು. ಆದ್ರೆ ದೀಪಕ್ ಚಾಹರ್ ಅವರ ಆಕರ್ಷಕ ಅಜೇಯ 69 ರನ್ ಹಾಗೂ ಭುವನೇಶ್ವರ್ ಕುಮಾರ್ ಅಜೇಯ 19 ರನ್ ಗಳನ್ನು ದಾಖಲಿಸಿ ಟೀಮ್ ಇಂಡಿಯಾದ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಂಟನೇ ವಿಕೆಟ್ ಇವರಿಬ್ಬರು 84 ರನ್ ಕಲೆ ಹಾಕಿ ಲಂಕಾ ತಂಡದ ಗೆಲುವಿನ ಆಸೆಯನ್ನು ಭಗ್ನಗೊಳಿಸಿದ್ರು. ದೀಪಕ್ ಚಾಹರ್ 82 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಗಳನ್ನು ಸಿಡಿಸಿ ಅಜೇಯ 69 ರನ್ ಗಳಿಸಿದ್ರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡ್ರು.
ಇನ್ನುಳಿದಂತೆ ಟೀಮ್ ಇಂಡಿಯಾದ ಆರಂಭಿಕ ಪೃಥ್ವಿ ಶಾ 13 ರನ್ ಗಳಿಸಿದ್ರೆ, ಶಿಖರ್ ಧವನ್ 29 ರನ್ ಗೆ ಸುಸ್ತಾದ್ರು. ಹಾಗೇ, ಇಶಾನ್ ಕಿಶಾನ್ ಒಂದು ರನ್ ಗೆ ಸೀಮಿತವಾದ್ರು. ಇನ್ನೊಂದೆಡೆ ಮನೀಷ್ ಪಾಂಡೆ 37 ರನ್ ಗಳಿಸಿದ್ದಾಗ ರನೌಟ್ಗೆ ಬಲಿಯಾದ್ರೆ, ಸೂರ್ಯಕುಮಾರ್ ಯಾದವ್ ಅಬ್ಬರ 53 ರನ್ ಗೆ ಕೊನೆಗೊಂಡಿತ್ತು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿದ್ರೆ, ಕೃನಾಲ್ ಪಾಂಡ್ಯ 35 ರನ್ ಗಳಿಸಿದ್ದರು. ಅಂತಿಮವಾಗಿ ಟೀಮ್ ಇಂಡಿಯಾ 49.1 ಓವರ್ ಗಳಲ್ಲಿ 277 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಇದಕ್ಕು ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿತ್ತು. ಲಂಕಾ ಪರ ಅವಿಶ್ಕಾ ಫರ್ನಾಂಡೊ (50) ಮತ್ತು ಅಸಲಾಂಕ (65 ರನ್) ಆಕರ್ಷಕ ಅರ್ಧಶತಕ ದಾಖಲಿಸಿದ್ರು. ಇನ್ನುಳಿದಂತೆ ಮಿನೋದ್ ಭಾನುಕಾ 36 ರನ್ ಗಳಿಸಿದ್ರೆ, ಧನಂಜಯ ಡಿ ಸಿಲ್ವಾ 32 ರನ್ ಹಾಗೂ ಚರಿತ್ ಕರುಣರತ್ನೆ ಅಜೇಯ 44 ರನ್ ಸಿಡಿಸಿದ್ರು. ಟೀಮ್ ಇಂಡಿಯಾ ಪರ ದೀಪಕ್ ಚಾಹರ್ ಎರಡು ವಿಕೆಟ್ ಪಡೆದ್ರೆ, ಭುವನೇಶ್ವರ್ ಕುಮಾರ್ ಮತ್ತು ಯುಜುವೇಂದ್ರ ಚಾಹಲ್ ಅವರು ತಲಾ ಮೂರು ವಿಕೆಟ್ ಉರುಳಿಸಿದ್ರು.