ಯಲ್ಲಮ್ಮನ ಹುಂಡಿಯಲ್ಲಿ ಸಿಕ್ಕ ನಾಲ್ಕು ವಿಶೇಷ ಹರಿಕೆ ಪತ್ರಗಳು
ಬೆಳಗಾವಿ: ಜಿಲ್ಲೆಯ ಸವದತ್ತಿಯ ಯಲ್ಲಮ್ಮ ಗುಡ್ಡದ ರೇಣುಕಾ ದೇವಿಯ ಹುಂಡಿ ಎಣಿಕೆ ಕಾರ್ಯ ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಹುಂಡಿಯಲ್ಲಿ ವಿಶೇಷ ಪತ್ರವೊಂದು ದೊರತಿದೆ. ಪತ್ರದಲ್ಲಿ ನನ್ನ ಮಗಳಿಗೆ ನಮಗಿಂತ 100 ಪಟ್ಟು ಅಧಿಕ ಆಸ್ತಿ ಇರುವ ವರನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು ಎಂಬ ಪತ್ರದೊಂದಿಗೆ ಇನ್ನೂ 3 ವಿಶೇಷ ಪತ್ರ ಸಿಕ್ಕಿವೆ.
ಅಲ್ಲದೇ ತಾಯಿ ನನಗೆ ಪಿಎಸ್ಐ ಹುದ್ದೆ ಕರುಣಿಸು, ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು, ತಾಯಿ ನಾನು ಇಷ್ಟಪಟ್ಟವರೊಂದಿಗೆ ನನಗೆ ವಿವಾಹವಾಗಿಸು. ಎಂದು ಭಕ್ತರು ತಾಯಿಯ ಹತ್ತಿರ ಮೊರೆ ಇಟ್ಟಿದ್ದಾರೆ.
ನಾಲ್ಕು ದಿನಗಳ ಎಣಿಕೆ ಕಾರ್ಯದಲ್ಲಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 1.30 ಕೋಟಿ ರೂ. ಸಂಗ್ರಹವಾಗಿದೆ ಎಂದು ಯಲ್ಲಮ್ಮಾ ದೇವಸ್ಥಾನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 12. 45 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 3.08 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹಲವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಗೆ ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡಿಯಲಿದೆ ಎಂದರು.